ಬೆಂಗಳೂರು: ಕಾಲ್ ಸೆಂಟರ್ ನಿಂದ ಉದ್ಯೋಗಿಗಳನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.. ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..
ನಿನ್ನೆ ರಾತ್ರಿ ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಉದ್ಯೋಗಿಗಳನ್ನು ಕೆಲಸ ಮುಗಿಸಿ ಮನೆಗೆ ತೆರಳು ವೇಳೆ ಆರೋಪಿಗಳ ಗ್ಯಾಂಗ್ ಉದ್ಯೋಗಿಗಗಳನ್ನು ಅಪಹರಿಸಿದೆ.. ಬಳಿಕ ಅವರ ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡು ಕಂಪನಿ ಮ್ಯಾನೇಜರ್ಗೆ ಕರೆ ಮಾಡಿ ನಿಮ್ಮ ನಾಲ್ವರು ಸಿಬ್ಬಂದಿ ನಮ್ಮ ಬಳಿ ಇದ್ದಾರೆ. 18 ಲಕ್ಷ ರೂಪಾಯಿ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದಾರೆ.. ತಕ್ಷಣ ಮ್ಯಾನೇಜರ್, ಕಂಪನಿಯ ಖಾತೆಯಿಂದ 18 ಲಕ್ಷ ರೂಪಾಯಿಯನ್ನು ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗೆ ಆನ್ಲೈನ್ನಲ್ಲಿ ವರ್ಗಾಯಿಸಿದ್ದಾರೆ.
ಬಳಿಕ ಮುಂಜಾನೆ 4 ಗಂಟೆಗೆ ಪೊಲೀಸರಿಗೆ ಬಿಪಿಒ ಸಿಬ್ಬಂದಿ ವಿಚಾರ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ಕು ಟೀಂ ಮಾಡಿಕೊಂಡು ಆರೋಪಿಗಳ ಹುಡುಕಾಟ ಶುರು ಮಾಡಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಿದ್ದ ಜಾಗ ಪೊಲೀಸರು ಪತ್ತೆಹಚ್ಚಿದರು. ಹೊಸಕೋಟೆಯ ಲಾಡ್ಜ್ನಲ್ಲಿ ನಾಲ್ವರನ್ನು ಆರೋಪಿಗಳು ಕೂಡಿ ಹಾಕಿದ್ದರು. ಉದ್ಯೋಗಿಗಳನ್ನು ರಕ್ಷಿಸಿ, 8 ಆರೋಪಿಗಳನ್ನು ಬಂಧಿಸಿ, ಎರಡು ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಕಾಲ್ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಆರೋಪಿಗಳು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕಂಪನಿಯ ಮ್ಯಾನೇಜರ್ ಲೆವೆಲ್ನ ನಾಲ್ಕು ಸಿಬ್ಬಂದಿಯನ್ನು 8 ಜನ ಬಂದು ಮಾತನಾಡಿಸಿದ್ದರು. ಪೊಲೀಸ್ ಅಂತ ಹೇಳಿ ಡಿಟೇಲ್ ಕೊಡಿ ಎಂದು ಕರೆದಿದ್ದಾರೆ. ನಂತರ ಕೆಳಗೆ ಕರೆದುಕೊಂಡು ಬಂದು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಆರೋಪಿಗಳು ದುಡ್ಡಿಗೆ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಮ್ಯಾನೇಜರ್ ಅಕೌಂಟ್ನಿಂದ ಆರೋಪಿಗಳ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಆಗಿದೆ.
ಸುಮಾರು 18.90 ಲಕ್ಷ ಹಣವನ್ನ ಆನ್ಲೈನ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ಹಾರ್ಡ್ಕ್ಯಾಶ್ಗೆ ಡಿಮ್ಯಾಂಡ್ ಮಾಡಿದ್ದಾಗ ಪೊಲೀಸರಿಗೆ ಮಾಹಿತಿ ಬಂದಿದೆ. ಬಳಿಕ ನಾಲ್ಕು ತಂಡ ಮಾಡಿ 8 ಜನ ಆರೋಪಿಗಳನ್ನ ಬಂಧಿಸಿದ್ದೇವೆ. ಇವರನ್ನ ಕರೆದೊಯ್ಯಲು ಬಳಕೆಯಾಗಿದ್ದ 2 ವಾಹನ ಸೀಜ್ ಮಾಡಿದ್ದೇವೆ. ಆರೋಪಿಗಳಲ್ಲಿ ಬಹುತೇಕರು ಕೋಲಾರ ಮೂಲದವರು. ಹೆಚ್ಚಿನ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


