ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಎನ್. ಡಬ್ಲ್ಯು. ಕೆ. ಎಸ್. ಆರ್.ಟಿ.ಸಿ. ಬಸ್ಸನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯದ ಆದೇಶದ ಪ್ರಕಾರ ಸಾರಿಗೆ ಸಂಸ್ಥೆಯ ಶಿರಸಿ ಡಿಪೋ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಸ್ಸನ್ನೇ ಜಪ್ತಿ ಮಾಡಲಾಗಿದೆ.
2022 ರ ಜುಲೈ 7 ರಂದು ಬೆಳಗ್ಗೆ 5-30ರ ವೇಳೆಗೆ ಗಣೇಶ್ ಎಂಬ ಯುವಕ ಪತ್ರಿಕೆ ಹಂಚಲು ಸೈಕಲ್ನಲ್ಲಿ ತೆರಳುತ್ತಿದ್ದಾಗ ಸಾಗರದ ಪ್ರವಾಸಿ ಮಂದಿರದ ಎದುರು ಬಸ್ ಸೈಕಲ್ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮದಿಂದಾಗಿ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು
ಮೃತ ಗಣೇಶನ ಪೋಷಕರು ಅಪಘಾತಕ್ಕೆ ಪರಿಹಾರ ಕೋರಿ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಗಣೇಶ್ ಅವರ ಪೋಷಕರಿಗೆ ಮೂರು ತಿಂಗಳಿನೊಳಗೆ ಪರಿಹಾರ ನೀಡುವಂತೆ 2024ರ ಜುಲೈ 8 ರಂದು ಕೋರ್ಟ್ ಆದೇಶಿಸಿತ್ತು. ಈ ಆದೇಶ ನೀಡಿದ್ರು ಸಹ ಎನ್.ಡಬ್ಲ್ಯು ಕೆ.ಎಸ್.ಆರ್.ಟಿ.ಸಿ. ಪರಿಹಾರ ನೀಡದ ಕಾರಣ ಗಣೇಶನ ತಾಯಿ ಉಮಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ನೋಟಿಸ್ ಜಾರಿ ಅದ ನಂತರವೂ ಸಾರಿಗೆ ಇಲಾಖೆ ಪರಿಹಾರದ ಹಣ ಪಾವತಿಸದ ಕಾರಣ ಶಿರಸಿ ಡಿಪೋಗೆ ಸೇರಿದ ಬಸ್ಸನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಬಸ್ಸನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.