ಬೆಂಗಳೂರು: ಹುಟ್ಟುಹಬ್ಬದ ದಿನವೇ ಬಾಲಕ ಅಪಘಾತಕ್ಕೆ ಬಲಿಯಾದ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಭಾನು ತೇಜ(10) ಮೃತ ಬಾಲಕ. ಶನಿವಾರ ರಾತ್ರಿ ಅಣ್ಣನ ಜೊತೆ ಹೊರಮಾವುಗೆ ತೆರಳುತ್ತಿದ್ದಾಗ ಹೆಣ್ಣೂರು ಬಂಡೆಯ ಕ್ಲಾಸಿಕ್ ರಾಯಲ್ ಗಾರ್ಡನ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಏಕಾಏಕಿ ಟ್ರಕ್ ಡಿಕ್ಕಿ ಹೊಡೆದಿದೆ. ಟ್ರಕ್ನ ಎರಡು ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಭಾನು ತೇಜ ಶಿರ ಛಿದ್ರಛಿದ್ರವಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಟ್ರಕ್ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾಗಿದ್ದ ರವಿ ಹಾಗೂ ಸುಮಾ ದಂಪತಿಯ ಏಕೈಕ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯಲು ಗುರುಗಳ ಜೊತೆಗೆ ವಾಸವಾಗಿದ್ದನು. ಶನಿವಾರ ಭಾನು ತೇಜನ ಹುಟ್ಟುಹಬ್ಬವಿತ್ತು. ಹುಟ್ಟು ಹಬ್ಬ ಆಚರಣೆಗಾಗಿ ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಹೊಗಿದ್ದನು. ಹುಟ್ಟು ಹಬ್ಬ ಆಚರಣೆ ಬಳಿಕ, ಅಣ್ಣ ಚಕ್ರಧರಣ್ ಜೊತೆಗೆ ಬೈಕ್ನಲ್ಲಿ ವಾಪಸ್ ಆರ್ಟಿ ನಗರದತ್ತ ತೆರಳುವಾಗ ಘಟನೆ ನಡೆದಿದೆ.
ಮೃತ ಭಾನು ತೇಜಾ ಮಾವ ಆನಂದ್ ಮಾತನಾಡಿ, ಭಾನು ತೇಜಾ ತಂದೆಗೆ ಮಗು ವೇದ ಕಲಿಯಬೇಕೆಂಬ ಆಸೆ ಇತ್ತು. ಒಂದು ತಿಂಗಳ ಹಿಂದೆ ವೇದ ಕಲಿಯಲು ಮಗುವನ್ನ ಬಿಟ್ಟಿದ್ದರು. ಶನಿವಾರ ಮಗುವಿನ ಹುಟ್ಟುಹಬ್ಬವಿತ್ತು. ಅವನು ಅಕ್ಕನ ಮನೆಗೆ ಬಂದು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದನು. ಊಟ ಮಾಡಿ ಸಂಜೆ ಹೊರಡಬೇಕಾದರೆ ಅವಘಡ ನಡೆದಿದೆ ಎಂದು ಹೇಳಿದರು.
ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದು ಆತನ ಬಂಧನಕ್ಕೆ ಈಗ ಪೊಲೀಸರು ಶೋಧ ನಡೆಸುತ್ತಿದ್ದಾರೆ.