ಕರ್ನಾಟಕದ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ, ಇದೀಗ ಪಶ್ಚಿಮ ಬಂಗಾಳದ ನ್ಯಾಯಾಲಯಗಳಿಗೂ ಏಕಕಾಲಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ದೇಶಾದ್ಯಂತ ಭೀತಿ ಸೃಷ್ಟಿಸಿದೆ. ಪಶ್ಚಿಮ ಬಂಗಾಳದಾದ್ಯಂತ ಇರುವ ಪ್ರಮುಖ ನ್ಯಾಯಾಲಯಗಳ ಮೇಲೆ ಕಿಡಿಗೇಡಿಗಳು ಇಮೇಲ್ ಮೂಲಕ ದಾಳಿಯ ಎಚ್ಚರಿಕೆ ನೀಡಿದ್ದು, ಇಡೀ ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕೋಲ್ಕತ್ತಾದ ಸಿಟಿ ಸೆಷನ್ಸ್ ಕೋರ್ಟ್ ಹಾಗೂ ಬ್ಯಾಂಕ್ಶಾಲ್ ಕೋರ್ಟ್ ಸೇರಿದಂತೆ ಅಸನ್ಸೋಲ್ ಮತ್ತು ದುರ್ಗಾಪುರದ ಉಪ-ವಿಭಾಗೀಯ ನ್ಯಾಯಾಲಯಗಳಿಗೂ ಏಕಕಾಲಕ್ಕೆ ಈ ಇಮೇಲ್ ತಲುಪಿದೆ. ಬೆದರಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನ್ಯಾಯಾಲಯದ ಆವರಣದಲ್ಲಿದ್ದ ನ್ಯಾಯಾಧೀಶರು, ವಕೀಲರು ಮತ್ತು ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಕ್ಕೆ ಸ್ಥಳಾಂತರಿಸಿದ್ದಾರೆ.
ಪ್ರಸ್ತುತ ನ್ಯಾಯಾಲಯದ ಪ್ರತಿ ಮೂಲೆಯಲ್ಲೂ ಶ್ವಾನದಳ ಮತ್ತು ತಜ್ಞರ ತಂಡದಿಂದ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಇಮೇಲ್ ಕಳುಹಿಸಿದ ಮೂಲ ಯಾವುದು? ಇದರ ಹಿಂದೆ ಯಾವುದಾದರೂ ಉಗ್ರ ಸಂಘಟನೆಯ ಕೈವಾಡವಿದೆಯೇ ಅಥವಾ ಸಾರ್ವಜನಿಕ ಶಾಂತಿ ಕದಡಲು ಯಾರಾದರೂ ವ್ಯಕ್ತಿ ಮಾಡಿರುವ ಕೃತ್ಯವೇ ಎಂಬ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಏಕಕಾಲಕ್ಕೆ ಹಲವು ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡಿರುವುದು ಭದ್ರತಾ ವೈಫಲ್ಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ.


