ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಇಡೀ ಭಾರತ ಮಾತ್ರ ಅಲ್ಲ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಮಿನಿ ಸ್ವಿಟ್ಜರ್ಲ್ಯಾಂಡ್ ಖ್ಯಾತಿಯ ಬೈಸರನ್ನಲ್ಲಿ ನರರೂಪ ರಕ್ಕಸರಾದ ಭಯೋತ್ಪಾದಕರ ಗುಂಡಿನ ದಾಳಿ ಹತ್ತಾರು ಪ್ರವಾಸಿಗರನ್ನು ಬಲಿ ಪಡೆದಿದೆ.
ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಿಂದ ಕೇವಲ 5ಕಿಲೋಮೀಟರ್ ದೂರದಲ್ಲಿರುವ ಈ ಭೂ ಲೋಕದ ಸ್ವರ್ಗದ ಮೇಲೆ ರಕ್ತದೋಕುಳಿಯೇ ಹರಿದಿದೆ.
ಲಷ್ಕರ್ ಉಗ್ರರು ನಡೆಸಿದ ಕಂಡೂ ಕೇಳರಿಯದ ದಾಳಿಯ ಕಾರಣ ಎಷ್ಟೋ ಪ್ರಶಾಂತ ವಾತವರಣದಿಂದ ಕೂಡಿರುತ್ತಿದ್ದ ಈ ಸುಂದರವಾದ ಕಣಿವೆಯಲ್ಲಿ ಇಂದು ಬರೀ ಆರ್ತನಾದ ಕೇಳಿಸುತ್ತಿದೆ.
ಸ್ವಿಟ್ಜರ್ಲ್ಯಾಂಡ್ ನ ಹಸಿರು ಮೈದಾನಗಳ ಮಾದರಿಯಲ್ಲಿ ಪ್ರಕೃತಿ ಸೌಂದರ್ಯದಿಂದ ಕಣ್ಣಿಗೆ ಹಬ್ಬವನ್ನು ಉಂಟು ಮಾಡುವ ಆಕರ್ಷಣಿಯವಾದ ಹಸಿರು ಮೈದಾನ ಹೊಂದಿರುವ ಕಾರಣ ಬೈಸರನ್ ಭಾರತದ ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಫೇಮಸ್ ಆಗಿದೆ.
ದಟ್ಟವಾದ ಪೈನ್ ಅರಣ್ಯ, ಹಿಮದಿಂದ ಆವೃತವಾದ ಪರ್ವತಗಳ ನಡುವೆ ಇರುವ ಹಸಿರು ಹುಲ್ಲಿನ ಮೈದಾನಗಳು ನಯನಮನೋಹರ ಎಂದರೇ ತಪ್ಪಾಗಲಾರದು.
ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯ ಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ.. ಅದಕ್ಕೆ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು. ಬೇಸಿಗೆಯಲ್ಲೂ ಇಲ್ಲಿ ಹಸಿರು ನಳನಳಿಸುತ್ತಿರುತ್ತದೆ. ಪಿಕ್ನಿಕ್, ಫೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣ.ತುಲಿಯನ್ ಸರೋವರದ ಕಡೆ ಟ್ರೆಕ್ಕಿಂಗ್ ಹೋಗಬೇಕು ಅಂದ್ರೆ ಟ್ರೆಕ್ಕಿಗಳಿಗೆ ಇದು ಒಳ್ಳೆಯ ಕ್ಯಾಂಪ್ ಸೈಟ್ ಕೂಡ ಹೌದು.
ದಟ್ಟಾರಣ್ಯ.. ನಡುವೆ ಹಸಿರು ಮೈದಾನ.. ಹಿಮಾಚ್ಛಾದಿತ ಪರ್ವತಗಳು.. ಲಿಡ್ಡರ್ ನದಿಯ ಸುಂದರ ದೃಶ್ಯ ಬೈಸರನ್ ಕಣಿವೆಗೆ ಮತ್ತೊಂದು ಆಕರ್ಷಣೆ.ಹಿಮವನ್ನು ಆಸ್ವಾದಿಸಬೇಕು ಅಂದರೇ ಜನವರಿಯಿಂದ ಮಾರ್ಚ್ ವರೆಗೂ.. ಹಸಿರಿನ ಆಹ್ಲಾದಕರ ವಾತಾವರಣ ಆಸ್ವಾದಿಸಲು ಏಪ್ರಿಲ್ – ಜೂನ್ ನಡುವೆ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ.
ಅತ್ಯಂತ ಪ್ರಸಿದ್ಧ ತಾಣವಾದ ಇಲ್ಲಿಗೆ ಕಾಲ್ನಡಿಗೆ ಇಲ್ಲವೇ ಕುದುರೆಗಳ ನೆರವಿನಿಂದ ಮಾತ್ರ ಇಲ್ಲಿಗೆ ತಲುಪಬಹುದು.