ಬೆಂಗಳೂರು: ಹಣಕಾಸು ನಷ್ಟದಿಂದಾಗಿ ಮನನೊಂದು ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ನಡೆದಿದೆ..
ವೆಂಕಟೇಶ್ ಮಲ್ಲೇಶ್ವರ ಬಿಜೆಪಿ ಮಂಡಲದ ಕಾರ್ಯಕರ್ತ ಆಗಿದ್ದು, ಶಾಸಕ ಅಶ್ವತ್ಥ್ ನಾರಾಯಣ ಅವರಿಗೆ ಆಪ್ತರಾಗಿದ್ದರು ಎನ್ನಲಾಗ್ತಿದೆ. ಸದ್ಯ ಮೃತದೇಹವನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಮಧ್ಯಾಹ್ನ ಅಶ್ವಥ್ ನಾರಾಯಣ್ ಅವರು ದರ್ಶನ ಮಾಡಲಿದ್ದಾರೆ.
ಇನ್ನು ವೆಂಕಟೇಶ್ ಕಳೆದ 2 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವ ಪತ್ತೆಯಾಗಿದೆ ಅಂತ ಹೇಳಲಾಗ್ತಿದೆ. ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಚೀಟಿ ನಡೆಸುತ್ತಿದ್ದರು. ಆದ್ರೆ 7 ಜನ ಚೀಟಿ ಹಣ ಕಟ್ಟದೇ ಮೋಸ ಮಾಡಿದ್ರು. ಇದೇ ಸಮಯದಲ್ಲಿ ಚೀಟಿ ಕಟ್ಟಿದ್ದ ಇನ್ನುಳಿದ ನಾಲ್ವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.


