ಮೈಸೂರು : ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ 126 ಮರ ಕಡಿದು ಸಾಗಿಸಿದ ಆರೋಪದಡಿ ವಿಕ್ರಮ್ ಸಿಂಹ ವಿರುದ್ಧ ಕೇಸ್ ದಾಖಲಾಗಿತ್ತು.
ಪ್ರಕರಣ ಸಂಭಂದ ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ವಿಕ್ರಮ್ ವಿಚಾರಣೆ ಮಾಡಲಾಗುತ್ತಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಜಯಮ್ಮರಿಗೆ ಸೇರಿದ ಸರ್ವೆ ನಂಬರ್ 16/P2ರಲ್ಲಿರುವ 3.10 ಎಕರೆ ಜಮೀನು ಪಡೆದಿದ್ದ ವಿಕ್ರಮ್ ಸಿಂಹ, ಶುಂಠಿ ಬೆಳೆಯಲು ಜಮೀನು ಪಡೆದು ಅಗ್ರಿಮೆಂಟ್ ಮಾಡಿಕೊಂಡಿದ್ದರು.

ಬೇಲೂರು ತಹಶೀಲ್ದಾರ್ ಮಮತಾ ಸಮಯಪ್ರಜ್ಞೆಯಿಂದ ಡಿಸೆಂಬರ್ 16ರಂದು 216 ಮರಗಳ ಮಾರಹೋಮ ಪ್ರಕರಣ ಬೆಳಕಿಗೆ ಬಂದಿತ್ತು. ಒಪ್ಪಂದ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಸೇರಿದಂತೆ ಸೇರಿ 12 ಎಕರೆಯಲ್ಲಿ ಬೆಳೆದಿದ್ದ ಹೊನ್ನೆ, ನಂದಿ, ಗರಿಹೆಬ್ಬೇವು, ಹೆಬ್ಬಲಸು, ಮಾವು, ಹಲಸು ಮರಗಳ ಹನನ ಮಾಡಲಾಗಿದೆ.
25 ರಿಂದ 30 ಲೋಡ್ ಮರ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ಮಮತಾ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು 2 ಹಿಟಾಚಿ, 2 ಪವರ್ ಚೈಣ್, 1 ಟ್ರೈಲರ್, ಯಂತ್ರಗಳನ್ನು ವಶಕ್ಕೆ ಪಡೆದಿದ್ದರು.
ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಅರಣ್ಯ ಇಲಾಖೆ FIR ದಾಖಲಿಸಿದ್ದು, 126 ಮರ ಕಡಿಯಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಡಿಸೆಂಬರ್ 25 ರಂದು ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿ ಗ್ರಾಮದಲ್ಲಿರುವ ವಿಕ್ರಂ ಸಿಂಹ ನಿವಾಸಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ತಂಡ ಭೇಟಿ ನೀಡಿತ್ತು. ಈ ವೇಳೆ ವಿಕ್ರಂ ಸಿಂಹ ಓಡಿ ಹೋಗಿ ತಲೆಮರೆಸಿಕೊಂಡಿದ್ದಾರೆ ಎಂದು ಸರ್ಕಾರಕ್ಕೆ ಅರಣ್ಯ ಇಲಾಖೆ ವರದಿ ನೀಡಿತ್ತು. ಡಿಸೆಂಬರ್ 25 ರಂದು ಹಾಸನಕ್ಕೆ ಆಗಮಿಸಿ ಮಾಧ್ಯಮಗಳಿಗೆ ವಿಕ್ರಂ ಸಿಂಹ ಹೇಳಿಕೆ ನೀಡಿದ್ದರು.