ಹುಬ್ಬಳ್ಳಿ: ಸರ್ಕಾರ ನೇಹಾ ಕೊಲೆಯನ್ನು ಜಾತಿ ಧರ್ಮದ ಬಣ್ಣ ಬಳಿಯಬಾರದು. ಕೊಲೆ ಕೊಲೆಯೇ, ಕೊಲೆ ಮಾಡಿದವನು ಕೊಲೆಗಡುಕನೇ. ಸರ್ಕಾರ ಈ ಕೂಡಲೇ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ನಗರದ ಬಿಡ್ನಾದ ನೇಹಾ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡುವಳಿಕೆ ನೋಡದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನಿಸುತ್ತಿದೆ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಆಗ್ರಹ ಸಿಬಿಐ ಒಪ್ಪಿಸಬೇಕೆಂದು, ಆದರೆ ರಾಜ್ಯ ಸರ್ಕಾರ ನಮ್ಮ ಹೋರಾಟದ ಬಳಿಕ ಸಿಐಡಿಗೆ ವಹಿಸಿದೆ. ತನಿಖೆ ಆರಂಭಗೊಂಡ ನಂತರ ಈವರೆಗೆ ಕೇವಲ ಒಬ್ಬರನ್ನು ಬಂಧನ ಮಾಡಿಲಾಗಿದೆ ಎಂದರು.
ನೇಹಾ ಅವರ ತಂದೆ ನಾಲ್ಕೈದು ಜನರ ಹೆಸರನ್ನು ಹೇಳಿದ್ದಾರೆ. ಆದರೆ ಅಧಿಕಾರಿಗಳು ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ. ನೇಹಾ ಪ್ರಕರಣದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ, ರಾಜ್ಯ ಸರ್ಕಾರ ತನಿಖೆ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ. ಇದಕ್ಕೆ ಜಾತಿ ಧರ್ಮದ ಬಣ್ಣ ಬಳಿಯಬಾರದು. ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಈ ಹಿಂದೆ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಬಿದ್ದಾಗ ಅವರಿಗೆ ನ್ಯಾಯ ಸಿಗಲಿಲ್ಲ. ಬಿಜೆಪಿ ಯಾವ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿಲ್ಲ, ಮಂತ್ರಿಗಳ ಹೇಳಿಕೆಗಳು ಎಲ್ಲೆಡೆ ವೈರಲ್ ಆಗಿವೆ. ಹೀಗಾಗಿ ತನಿಖೆಯನ್ನು ರಾಜ್ಯ ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ನಾಲಾಯಕ್ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು,ನಾವು ಮೋದಿ ಅವರ ಬಗ್ಗೆ ಮಾತನಾಡಿದರೇ ಸುಮ್ಮನೆ ಇರಬೇಕಾ? ಸಿಎಂ ಹಾಗೂ ಸಚಿವ ಸಂತೋಷ ಲಾಡ್ ಶಕುನಿ ಎಂದು ಹೇಳುತ್ತಾರೆ. ಇದನ್ನೆಲ್ಲ ನೋಡಿ ಸುಮ್ಮನೆ ಇರಬೇಕಾ? ಏಕವಚನ ಬಳಕೆ ಮಾಡುತ್ತಾರೆ. ನಾನು ಮರಾಠ ಸಮುದಾಯದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.