ರಾಮಮಂದಿರ: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಅದೇ ವಿಚಾರವಾಗಿ ಮೂವರು ಶಾಸಕರ ನಡುವೆ ಟಾಕ್ ವಾರ್ ನಡೆದಿದೆ. ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿಯ ಇಬ್ಬರು ಶಾಸಕರ ನಡುವೆ ಟಾಕ್ ಫೈಟ್ ನಡೆದಿದೆ. ಆ ಕುರಿತು ಒಂದು ವರದಿ ಇಲ್ಲಿದೆ ನೋಡಿ

ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಹಾರಕೂಡ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರ ಮಧ್ಯೆ ರಾಮ ಮಂದಿರ ವಿಚಾರಕ್ಕೆ ತುಂಬಿದ ಸಭೆಯಲ್ಲೇ ವಾಕ್ಸಮರ ನಡೆದಿದೆ. ಬಸವಕಲ್ಯಾಣ ಶಾಸಕ ಶರಣು ಸಲಗರ್ v/s ಆಳಂದ ಶಾಸಕ ಬಿ.ಆರ್.ಪಾಟೀಲ್ v/s ಹುಮನಾಬಾದ್ ಶಾಸಕ ಸಿದ್ದು ಪಾಟೀಲ ನಡುವೆ ಟಾಕ್ ಪೈಟ್ ನಡೆದಿದೆ. ಸಚಿವರಾದ ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಸಂಸದ ಉಮೇಶ ಜಾಧವ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದೇ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್, ರಾಮ ಮಂದಿರ ವಿಚಾರ ಪ್ರಸ್ತಾಪಿಸಿ.

ಮೋದಿ ನೇತೃತ್ವದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗ್ತಿದೆ, ಎಲ್ಲರೂ ಹಬ್ಬದ ರೀತಿ ಜನವರಿ 22 ಅನ್ನು ಸಂಭ್ರಮಿಸಬೇಕು. ಕೋಟ್ಯಾನು ಹಿಂದೂಗಳ 500 ವರ್ಷಗಳ ಕನಸು ಈಡೇರಿದೆ. ಕೋಟಿ ಕೋಟಿ ಭಕ್ತರ ಆಸೆಯಾಗಿತ್ತು. ತಿಂಗಳಿಲ್ಲ, ದಿನಗಳಿಲ್ಲ, ವರ್ಷಗಳಿಲ್ಲ ಕೆಲವೇ ಕೆಲವು ಗಂಟೆಗಳಲ್ಲಿ ರಾಮ ಮಂದಿರ ನಿರ್ಮಾಣ ಆಗಿದೆ. ಅದೆಲ್ಲ ನರೇಂದ್ರ ಮೋದಿ ಪ್ರಯತ್ನದಿಂದ ಎಂದು ಬಣ್ಣಿಸಿದ್ದರು.
ಬಳಿಕ ಮಾತನಾಡಿದ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಶರಣು ಸಲಗರ್ಗೆ ಕೌಂಟರ್ ಕೊಟ್ಟಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಇಲ್ಲಿಗೆ ಬಂದವರೆಲ್ಲ ಭಕ್ತಿಯಿಂದ, ಪ್ರೀತಿಯಿಂದ ಪೂಜ್ಯರ ದರ್ಶನ ಪಡೆದು ಹೋಗಬೇಕಿದೆ. ಆದರೆ ಇವತ್ತು ವೇದಿಕೆ ಎಲ್ಲೆಲ್ಲೋ ಹೋಗುತ್ತಿದೆ ಅನ್ನೋ ಮೂಲಕ ವೇದಿಕೆ ಮೇಲೆಯೆ ಕೌಂಟರ್ ನೀಡಿದರು.

ಬಳಿಕ ಬಾಷಣಕ್ಕೆ ಅಗಮಿಸಿದ ಹುಮನಾಬಾದ್ ಶಾಸಕ ಸಿದ್ದು ಪಾಟೀಲ ಸಹ ಬಿ.ಆರ್. ಪಾಟೀಲ್ ಗೆ ವೇದಿಕೆ ಮೇಲೆ ತಿರುಗೇಟು ನೀಡುವ ಕೆಲಸ ಮಾಡಿದ್ರು. ಇದು ಧಾರ್ಮಿಕ ಕಾರ್ಯಕ್ರಮ. ಧರ್ಮದ ಬಗ್ಗೆ ಮಾತನಾಡೊದರಲ್ಲಿ ತಪ್ಪೇನಿದೆ.. ಧರ್ಮದ ಬಗ್ಗೆ ಮಾತನಾಡಿದ್ರೆ ಕೆಲವರಿಗೆ ಅರಗಿಸಿಕೊಳ್ಳೋಕೆ ಆಗಲ್ಲ. ನಮ್ಮ ಸಲಗರಣ್ಣ ಒಳ್ಳೆಯ ಮಾತುಗಳನ್ನು ಹೇಳಿದರು. ಅದು ಕೆಲವರಿಗೆ ಡೈಜೆಸ್ಟ್ ಮಾಡಿಕೊಳ್ಳಲು ಆಗೊದಿಲ್ಲಾ. ಅಂಥವರಿಗೆ ಏನು ಮಾಡೋಕಾಗಲ್ಲ ಎಂದು ಸಚಿವರು ಹಾಜರಿದ್ದ ವೇದಿಕೆ ಮೇಲೆಯೆ ಟಾಂಗ್ ನೀಡಿದರು.
ಒಟ್ನಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಬಿಜೆಪಿ- ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಶಾಸಕರ ಟಾಕ್ ವಾರ್ಗೆ ಹಾರ್ಕೂಡ ಜಾತ್ರಾ ಮಹೋತ್ಸವ ವೇದಿಕೆ ಸಾಕ್ಷಿಯಾಯಿತು. ನೆರೆದಿದ್ದ ಭಕ್ತರಿಗೆ ಇವರ ನಡೆಬೇಸರ ತರಿಸಿದ್ದಂತು ಸುಳ್ಳಲ್ಲಾ.


