ರಾಜಕೀಯರಾಜ್ಯಸುದ್ದಿ

ಭಾರತ ಹಿಂದೂ ರಾಷ್ಟ್ರ ಎಂಬ ಭಾಗವತ್ ಹೇಳಿಕೆ ಸತ್ಯ- ಜಗದೀಶ್​​​ ಶೆಟ್ಟರ್​

ಹುಬ್ಬಳ್ಳಿ: ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ‘ಭಾರತ ಒಂದು ಹಿಂದೂ ರಾಷ್ಟ್ರ’ ಎಂಬ ಹೇಳಿಕೆಯನ್ನು ಸಂಸದ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ಈ ದೇಶದಲ್ಲಿ ಬಹುಸಂಖ್ಯಾತರು ಹಿಂದೂಗಳಾಗಿದ್ದು, ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯಲು ಯಾವುದೇ ಅನುಮೋದನೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ತಪ್ಪುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯಿಂದಾಗಿ ಭಾರತ-ಪಾಕಿಸ್ತಾನ ವಿಭಜನೆಯಾಯಿತು. ಅಂದು ಮಹಾತ್ಮ ಗಾಂಧಿ ಮತ್ತು ನೆಹರೂ ಅವರು ದೇಶ ವಿಭಜನೆಗೆ ಅವಕಾಶ ನೀಡಬಾರದಿತ್ತು. ದೇಶ ವಿಭಜನೆಯಾದಾಗಲೇ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಮತ್ತು ಅಲ್ಲಿನ ಹಿಂದೂಗಳನ್ನು ಭಾರತಕ್ಕೆ ಪೂರ್ಣ ಪ್ರಮಾಣದಲ್ಲಿ ಕಳುಹಿಸಬೇಕಿತ್ತು. ಹಾಗೆ ಮಾಡಿದ್ದರೆ ಇಂದು ಯಾವುದೇ ಗೊಂದಲಗಳು ಉಂಟಾಗುತ್ತಿರಲಿಲ್ಲ,” ಎಂದು ಅವರು ನೇರವಾಗಿ ಹೇಳಿದರು.

ಇನ್ನು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ನಾಯಕರು ನಡೆದುಕೊಂಡ ಬಗ್ಗೆ ಮಾತನಾಡಿದ ಅವರು, ರಾಜ್ಯಪಾಲರು ಯಾವುದೇ ಸಂವಿಧಾನ ಬಾಹಿರ ಕೆಲಸ ಮಾಡಿಲ್ಲ. ಸರ್ಕಾರದ ಭಾಷಣದ ಪ್ರತಿ ಓದಿದ್ದಾರೆ. ಮೊದಲ ಮತ್ತು ಕೊನೆಯ ಪುಟ ಓದಿ ಹೊರಡುವುದು ನಿಯಮಾನುಸಾರವೇ ಆಗಿದೆ. ರಾಜ್ಯಪಾಲರ ಮೇಲೆ ಕೈ ಮಾಡುವುದು ಅಥವಾ ಅವರಿಗೆ ಅವಮಾನ ಮಾಡುವುದು ಸರಿಯಲ್ಲ. ಬಿ.ಕೆ. ಹರಿಪ್ರಸಾದ್ ಅವರು ಹಿರಿಯ ನಾಯಕರಾಗಿದ್ದು, ಗೌರವಯುತವಾಗಿ ನಡೆದುಕೊಳ್ಳಬೇಕು, ಎಂದು ಕಿವಿಮಾತು ಹೇಳಿದರು.

Comments (0)

Your email address will not be published. Required fields are marked *

Back to top button