ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಬಳಿಕ ಈಗ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ED) ಎಫ್ಐಆರ್ ದಾಖಲಿಸುವ ಸಾಧ್ಯತೆ ಇದೆ. ಒಂದು ವೇಳೆ ಇಡಿಯಲ್ಲೂ ಎಫ್ಐಆರ್ ದಾಖಲಾದರೆ, ಸಿದ್ದರಾಮಯ್ಯಗೆ ಡಬಲ್ ಸಂಕಷ್ಟ ಎದುರಾದಂತಾಗುತ್ತದೆ.
ಮುಡಾ ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ ಅವರು ಇಂದು ತಮ್ಮವರ ಮೂಲಕ ಇಡಿ ಕಚೇರಿಗೆ ದೂರು ತಲುಪಿಸಿದ್ದು, ಇದೀಗ ಇಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ಸ್ವೀಕೃತಿ ಪತ್ರ ಸಹ ನೀಡಿದ್ದಾರೆ. ಹೀಗಾಗಿ ಯಾವುದೇ ಸಮಯದಲ್ಲೂ ಸಹ ಸಿಎಂ ವಿರುದ್ಧ ಇಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಲಿದ್ದಾರೆ.
ಮುಡಾ ಹಗರಣ ಸಂಬಂಧಿಸಿದಂತೆ ಇಡಿಗೆ ದೂರು ನೀಡದ್ದ ಸ್ನೇಹಮಹಿ ಕೃಷ್ಣ. ಇನ್ನು ಈ ಬಗ್ಗೆ ಖುದ್ದು ಟಿವಿ9ಗೆ ಪ್ರತಿಕ್ರಿಯಿಸಿರುವ ಸ್ನೇಹಮಹಿ ಕೃಷ್ಣ,ಇಂದು ಇಡಿಗೆ ದೂರು ನೀಡಿದ್ದೆ. ದೂರಿಗೆ ಸ್ವೀಕೃತಿಯನ್ನು ನೀಡಿದ್ದಾರೆ. ದೂರನ್ನು ಸ್ವೀಕರಿಸಿ PMLA 2001 ಅಡಿಯಲ್ಲಿ ಬರುತ್ತಾದಾ ಎಂದು ತನಿಖೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಒಂದೆಡೆ ಇಡಿ ಮತ್ತೊಂದು ಕಡೆ ಸಿಬಿಐ ತೂಗುಗತ್ತಿ
ಲೋಕಾಯುಕ್ತ ತನಿಖೆ ಜೊತೆಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಡಬಲ್ ಟೆನ್ಷನ್ ಶುರುವಾಗಿದೆ. ಒಂದ್ಕಡೆ ಸಿಬಿಐ ತನಿಖೆಗೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುವ ಸಂಸ್ಥೆಯಾಗಿದೆ. ಹೀಗಾಗಿ ಪಾರದರ್ಶಕ ತನಿಖೆಯಾಗ್ಬೇಕು ಅಂದ್ರೆ ಸಿಬಿಐಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ದಸರಾ ರಜೆ ಬಳಿಕ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಗಳಿವೆ. ಮತ್ತೊಂದಡೆ ಇದೀಗ ಇಡಿ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.