Tuesday, June 24, 2025
26.4 C
Bengaluru
Google search engine
LIVE
ಮನೆ#Exclusive NewsTop Newsಪ್ರಾದೇಶಿಕ ಆಯುಕ್ತರ ಅಂಗಳಕ್ಕೆ ₹300 ಕೋಟಿ ಸರ್ಕಾರಿ ಭೂ ಕಬಳಿಕೆ ಹಗರಣ

ಪ್ರಾದೇಶಿಕ ಆಯುಕ್ತರ ಅಂಗಳಕ್ಕೆ ₹300 ಕೋಟಿ ಸರ್ಕಾರಿ ಭೂ ಕಬಳಿಕೆ ಹಗರಣ

ಬೆಂಗಳೂರು ನಗರ ಡಿಸಿ, ದಕ್ಷಿಣ ತಹಶೀಲ್ದಾರ್ ಹಾಗೂ ವಿಶೇಷ ತಹಶೀಲ್ದಾರ್ ಕಚೇರಿ ವಿರುದ್ಧ ಕೇಳಿ ಬಂದಿದ್ದ 300 ಕೋಟಿ ಭೂಹಗರಣದ ಕಡತ ಇದೀಗ ಪ್ರಾದೇಶಿಕ ಆಯುಕ್ತರ ಕಚೇರಿ ತಲುಪಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ಅವರು ಸರ್ಕಾರಿ ಭೂಮಿ ಪರಭಾರೆ ಕುರಿತ ಆರೋಪದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಈಗಾಗಲೇ ತಹಶೀಲ್ದಾರ್ ಕಚೇರಿ ಹಾಗೂ ಡಿಸಿ ಕಚೇರಿಯಲ್ಲಿದ್ದ ದೊಡ್ಡ ತೋಗೂರು ಗ್ರಾಮದ ಸರ್ವೆ ನಂ.105ರ ಕಡತಗಳನ್ನ ಪ್ರಾದೇಶಿಕ ಆಯುಕ್ತರು ತರಿಸಿಕೊಂಡಿದ್ದಾರೆ.

ಈ ಮಧ್ಯೆ, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್​ ಅವರಿಗೂ ಸಂಕಷ್ಟ ಎದುರಾಗಿದೆ. ಇದೇ ಮಾದರಿ ಕಡತ ಸಂಬಂಧ ವಿಶೇಷ ತಹಶೀಲ್ದಾರ್ ನಾಗರಾಜ್ ಈಗಾಗಲೇ ಸಸ್ಪೆಂಡ್ ಆಗಿದ್ದಾರೆ. ದೊಡ್ಡ ತೋಗೂರು ಗ್ರಾಮದ ಸರ್ವೆ ನಂಬರ್ 105ರ ಭೂ ಆದೇಶ ಸಂಬಂಧ ಲೋಕಾಯುಕ್ತಕ್ಕೆ ದೂರು ದಾಖಲಾದ ಕೆಲ ದಿನಗಳಲ್ಲೇ ನಗರ ಡಿಸಿ ದಯಾನಂದ್ ವರ್ಗಾವಣೆ ಆಗಿದ್ದಾರೆ. ಇದೀಗ ಶ್ರೀನಿವಾಸ್​ ಮೇಲೂ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸಸ್ಪೆನ್ಶನ್ ತಪ್ಪಿಸಿಕೊಳ್ಳಲು ಶ್ರೀನಿವಾಸ್​ ಅವರು ವರ್ಗಾವಣೆ ಬಯಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ಮತ್ತೊಂದು ಬೃಹತ್ ಭೂ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ವಿಶೇಷ ತಹಶೀಲ್ದಾರ್ ನಾಗರಾಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತಕ್ಕೆ ದಾಖಲೆಗಳ ಸಮೇತ ದೂರು ನೀಡಲಾಗಿತ್ತು.

ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ದೊಡ್ಡ ತೋಗೂರು ಗ್ರಾಮದ ಸರ್ವೆ ನಂ 105 ರಲ್ಲಿ 7 ಎಕರೆ 20 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲಾಗಿದೆ ಅಂತ ಆಘಾತಕಾರಿ ಅಂಶ ದೂರಿನಲ್ಲಿದೆ. ಮೂಲತಃ ಈ ಜಮೀನು ಸರ್ಕಾರಿ ಜಮೀನಾಗಿದ್ದು, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ ಎಂದು ಗೋಪಾಲ್ ಎಂಬುವರು ಲೋಕಾಯುಕ್ತಕ್ಕೆ ಕಂಪ್ಲೇಂಟ್ ನೀಡಿದ್ದರು.

ಈ ಸರ್ಕಾರಿ ಆಸ್ತಿ ಕಬಳಿಕೆಗಾಗಿ ಭೂಗಳ್ಳರ ಜೊತೆ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ. ಸರ್ವೆ ನಂ 105ರಲ್ಲಿ ಸರ್ಕಾರಿ ಹೆಸರಿನಲ್ಲಿದ್ದ 7 ಎಕರೆ 20 ಗುಂಟೆ ಜಮೀನನ್ನ ಮರಿಯಪ್ಪ ಹೆಸರಿಗೆ 4 ಎಕರೆ, ಚಂಗಪ್ಪ ಹೆಸರಿಗೆ 1 ಎಕರೆ 20 ಗುಂಟೆ ಮತ್ತು ಗಂಗಪ್ಪ ಎನ್ನುವವರ ಹೆಸರಿಗೆ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಲೋಕಾಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಈ ಪರಭಾರೆ ಪ್ರಕ್ರಿಯೆ ನಡೆದಿದೆ. ಇದೇ ಜಮೀನಿನ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. (ಸಂಖ್ಯೆ ccc 999/2023 wa1013/2023), (ಆಫಿಲು ಪ್ರಕರಣ ಸಂಖ್ಯೆ RP108/2024) ಇತ್ತು. ಆದರೂ ಇದನ್ನು ಮರೆಮಾಚಿ ಮೇಲಿನ ವ್ಯಕ್ತಿಗಳಿಗೆ ಆರ್​ಟಿಸಿ ಮಾಡಿಕೊಡಲಾಗಿದೆ.

ಈ ಹಗರಣದಲ್ಲಿ ಭೂಕಬಳಿಕೆಗೆ ವ್ಯವಸ್ಥಿತ ಪಿತೂರಿ ನಡೆದಿದೆ. ಅಧಿಕಾರಿಗಳು ಮತ್ತು ಮರಿಯಪ್ಪ, ಗಂಗಪ್ಪ, ಚಂಗಪ್ಪ ಹಾಗೂ ರಾಷ್ಟ್ರಕೂಟ ಬಿಲ್ಡರ್ಸ್​​ರವರು ಸೇರಿ ರಾಜರಾಜೇಶ್ವರಿ ನಗರದ ಸಬ್​ ರಿಜಿಸ್ಟ್ರಾರ್​ ಜೊತೆ ಶಾಮೀಲಾಗಿ 7 ಎಕರೆ 20 ಗುಂಟೆ ಜಮೀನನ್ನು ಸರ್ಕಾರಿ ಬೆಲೆ ಒಟ್ಟು 15 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡು ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. ಅಡ್ವಾನ್ಸ್​ ರೂಪದಲ್ಲಿ ಮರಿಯಪ್ಪ ಮತ್ತು ಇತರರು 2 ಕೋಟಿ 75 ಲಕ್ಷ ರೂಪಾಯಿಯನ್ನು ಆರ್​ಟಿಜಿಎಸ್​ ಮೂಲಕ ಪಡೆದಿದ್ದಾರೆ ಎಂದು ಇಸಿ ಮತ್ತು ರಿಜಿಸ್ಟ್ರಾರ್​ ಪ್ರತಿಗಳನ್ನು ದೂರಿನೊಟ್ಟಿಗೆ ಸಲ್ಲಿಸಲಾಗಿದೆ.

ಮರಿಯಪ್ಪ ಅವರು ಸರ್ವೆ ನಂ.81 ವಿಟ್ಟಸಂದ್ರ ಗ್ರಾಮದ ರೈತರಿಗೆ ಹಂಚಿಕೆಯಾಗಿರುವ LNDSR 217/1978-79 ಗ್ರಾಂಟ್​ ಆದೇಶದ ಪ್ರತಿಯನ್ನು ಫೋರ್ಜರಿ ಮಾಡಿ ಸರ್ಕಾರಿ ಜಮೀನಿನ ಸರ್ವೆ ನಂ 17ರ ಚಿಕ್ಕತೋಗೂರು ಗ್ರಾಮದಲ್ಲಿ 1.20 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಆರ್​ಟಿಸಿ, ಸಾಗುವಳಿ ಚೀಟಿ ಸೃಷ್ಟಿಸಿ ಅಧಿಕಾರಿಗಳಿಗೆ ಭಾರಿ ಪ್ರಮಾಣದಲ್ಲಿ ಲಂಚ ನೀಡಿ ಬೆಂಗಳೂರು ದಕ್ಷಿಣ ಎಸಿ ಕೋರ್ಟ್​ನಲ್ಲಿ ಆದೇಶ ಪಡೆದಿದ್ದಾರೆ ಎಂದು ದೂರಲಾಗಿದೆ.

ಸದರಿ ಭೂಮಿಯಲ್ಲಿ ರಿಯಲ್​ ಎಸ್ಟೇಟ್​ ಚಟುವಟಿಕೆಗಳು ನಡೆಯುತ್ತಿದ್ದು, ಬಹುಕೋಟಿ ಹಣದ ವಹಿವಾಟು ನಡೆದಿದೆ. ಇದೀಗ ಭೂ ಪರಭಾರೆ ಪ್ರಕರಣವು ಜಾರಿ ನಿರ್ದೇಶನಾಲಯದ ಅಂಗಳ ತಲುಪುವ ಸಾಧ್ಯತೆಯಿದೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments