ಬೆಳಗಾವಿ : ವಿಧಾನ ಪರಿಷತ್ತಿನ ಪ್ರಸ್ತುತ ಅಧಿವೇಶನವು ದಿನಾಂಕ:04.12.2023 ರಿಂದ 15.12.2023 ರವರೆಗೆ ಒಟ್ಟು 10 ದಿನಗಳು ಅಂದರೆ, 57 ಗಂಟೆ ನಿಮಿಷಗಳ ಕಾಲ ನಡೆಯಿತು. ಆ ಪೈಕಿ ಗದ್ದಲ ಹಾಗೂ ಧರಣಿಗಾಗಿ ಒಟ್ಟು 4 ಗಂಟೆ 30 ನಿಮಿಷಗಳನ್ನು ವ್ಯಯಿಸಲಾಗಿದೆ.
ಕಳೆದ ಅಧಿವೇಶನದಿಂದೀಚೆಗೆ ನಿಧನರಾದ ಒಟ್ಟು 11 ಗಣ್ಯರುಗಳಿಗೆ, ಸೇನಾ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭಂ ಗುಪ್ತಾ, ಹವಲ್ದಾರ ಅಬ್ದುಲ ಮಜಿಕ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಸಚಿನ್ ಲಾರ್ ಹಾಗೂ ಇತರ ವೀರ ಯೋಧರುಗಳಿಗೆ ಮತ್ತು ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಗಜರಾಜ ವೀರ ಅರ್ಜುನನಿಗೆ ಸದನವು ತನ್ನ ಸಂತಾಪವನ್ನು ವ್ಯಕ್ತಪಡಿಸಿತು.
ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರು ಮಂಡಿಸಿದರು. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ 01 ಮತ್ತು 02 ಪಟ್ಟಿಗಳನ್ನು ಮಂಡಿಸಲಾಯಿತು.
ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯಂತರ ವರದಿ ಹಾಗೂ ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯ 2023-24ನೇ ಸಾಲಿನ 136ನೇ ವರದಿಗಳನ್ನು ಒಪ್ಪಿಸಲಾಯಿತು.
2023-2024ನೇ ಸಾಲಿನ ಆಯವ್ಯಯ ಅಂದಾಜುಗಳ ಮೊದಲನೆ ಕಂತು ಹಾಗೂ 2023-24ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಯಿತು.

ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬ0ಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಕಾಲಾವಧಿಯನ್ನು ದಿನಾಂಕ:22.10.2023 ರಿಂದ 06 ತಿಂಗಳವರೆಗೆ. ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ಸದನ ಸಮಿತಿಯ ಕಾಲಾವಧಿಯನ್ನು ದಿನಾಂಕ:22.09.2023 ರಿಂದ 06 ತಿಂಗಳವರೆಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕ, 2023ನ್ನು ಪರಿಶೀಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ದಿನಾಂಕ:09.12.2023 ರಿಂದ 03 ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾವಗಳನ್ನು ಮಂಡಿಸಿ. ಸದನದ ಸಹಮತಿಯನ್ನು ಪಡೆಯಲಾಯಿತು.

ನಿಯಮ 59 ರಡಿಯಲ್ಲಿ ಒಟ್ಟು 05 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 01 ಸೂಚನೆಯನ್ನು ನಿಯಮ 330 ರಡಿ ಚರ್ಚಿಸಿ, ಉತ್ತರಿಸಲಾಯಿತು. ಉಳಿದ 03 ಸೂಚನೆಗಳನ್ನು ನಿಯಮ 68 ಕ್ಕೆ ಪರಿವರ್ತಿಸಲಾಗಿದ್ದು, 01 ಸೂಚನೆಯನ್ನು ಚರ್ಚಿಸಿ ಉತ್ತರಿಸಲಾಗಿರುತ್ತದೆ ಹಾಗೂ 01 ಸೂಚನೆಯನ್ನು ತಿರಸ್ಕರಿಸಲಾಗಿರುತ್ತದೆ.

ಪ್ರಸ್ತುತ ಅಧಿವೇಶನದಲ್ಲಿ ಒಟ್ಟು 1219 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ 150 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಿದ್ದು, ಅವುಗಳ ಪೈಕಿ 103 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು ಹಾಗೂ 41 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು. ಲಿಖಿತ ಮೂಲಕ ಉತ್ತರಿಸುವ ಒಟ್ಟು 1057 ಪ್ರಶ್ನೆಗಳ ಪೈಕಿ 970 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು.
ನಿಯಮ 58 ರಡಿಯಲ್ಲಿ ಅರ್ಧಗಂಟೆ ಕಾಲಾವಧಿ ಚರ್ಚೆಗಾಗಿ ಒಟ್ಟು 04 ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ. ಯಾವುದೇ ಸೂಚನೆಗಳನ್ನು ಚರ್ಚಿಸಿರುವುದಿಲ್ಲ.
ನಿಯಮ 72 ರಡಿಯಲ್ಲಿ 164 ಸೂಚನೆಗಳನ್ನು ಸ್ವೀಕರಿಸಿದ್ದು, ಅವುಗಳ ಪೈಕಿ 09 ಸೂಚನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು ಹಾಗೂ 69 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು.
ನಿಯಮ 330 ರಡಿಯಲ್ಲಿ 93 ಸೂಚನೆಗಳನ್ನು ಸ್ವೀಕರಿಸಿದ್ದು, ಅವುಗಳ ಪೈಕಿ 06 ಸೂಚನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು ಹಾಗೂ 35 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು.
ಎರಡು ಅರ್ಜಿಗಳು ಹಾಗೂ ಒಂದು ಹಕ್ಕುಚ್ಯುತಿ ಸೂಚನೆಯನ್ನು ಸದನದಲ್ಲಿ ಮಂಡಿಸಲಾಯಿತು.
ಶೂನ್ಯ ವೇಳೆ ಪ್ರಸ್ತಾವನೆಯ ಒಟ್ಟು 90+ ಸೂಚನೆಗಳ ಪೈಕಿ 52 ಸೂಚನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಒಟ್ಟು 17 ವಿಧೇಯಕಗಳಿಗೆ ವಿಧಾನ ಪರಿಷತ್ತು ತನ್ನ ಸಹಮತಿಯನ್ನು ನೀಡಿರುತ್ತದೆ.ಒಂದು ಅಧಿಕೃತ ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಗಿರುತ್ತದೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿ ಉತ್ತರಿಸಲಾಯಿತು.