Tuesday, June 24, 2025
25.1 C
Bengaluru
Google search engine
LIVE
ಮನೆಜಿಲ್ಲೆಒಳಮೀಸಲಾತಿ ವಿರುದ್ಧ ಬಂಜಾರ ಸಮುದಾಯ ಆಕ್ರೋಶ : ಬಿಜೆಪಿ ಮುಖಂಡ ಬಾಬು ರಾಜೇಂದ್ರ ನಾಯಕ್​ ಪ್ರತಿಭಟನೆ

ಒಳಮೀಸಲಾತಿ ವಿರುದ್ಧ ಬಂಜಾರ ಸಮುದಾಯ ಆಕ್ರೋಶ : ಬಿಜೆಪಿ ಮುಖಂಡ ಬಾಬು ರಾಜೇಂದ್ರ ನಾಯಕ್​ ಪ್ರತಿಭಟನೆ

ವಿಜಯಪುರ: ತರಾತುರಿಯಲ್ಲಿ ಒಳ ಮೀಸಲಾತಿ ಜಾರಿಗೆ ತರಲು ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಂಜಾರ ಸಮುದಾಯದ ಮುಖಂಡರು ಹಾಗೂ ಯುವಕರು ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

“ಸಿದ್ದರಾಮಯ್ಯ ಸರ್ಕಾರ ಕೇವಲ ವೋಟ್ ಬ್ಯಾಂಕ್ ಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾಮಾಜಿಕ ನ್ಯಾಯ ಕೇವಲ ಭಾಷಣಕಷ್ಟೇ ಸೀಮಿತವಾಗಿದೆ. ತಾನು ಹಿಂದುಳಿದ ಸಮುದಾಯದಿಂದ ಬಂದವನು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಹಿಂದುಳಿದ ಸಮಾಜವಾದ ಬಂಜಾರ ಸಮಾಜಕ್ಕೆ ಅನ್ಯಾಯ ಎಸಗುತ್ತಿದ್ದಾರೆ. ಅವಸರ ಅವಸರವಾಗಿ ಒಳ ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಪ್ರಯತ್ನಿಸುತ್ತಿರುವ ಸರ್ಕಾರದ ನಡೆ ಅವೈಜ್ಞಾನಿಕವಾಗಿದೆ. ಇದನ್ನು ರಾಜ್ಯಾದ್ಯಂತ ಬಂಜಾರ ಸಮುದಾಯ ಖಂಡಿಸಿ ಪ್ರತಿಭಟಿಸುತ್ತದೆ” ಎಂದು ಸಮುದಾಯದ ಮುಖಂಡರು, ಬಿಜೆಪಿ ನಾಯಕರಾದ ಡಾ. ಬಾಬುರಾಜೇಂದ್ರ ನಾಯ್ಕ್ ಹೇಳಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಸರ್ಕಾರ ಈಗಾಗಲೇ ಮುಗಿದು ಹೋದ ಕತೆಯಾಗಿರುವ ಸದಾಶಿವ ಆಯೋಗಕ್ಕೆ ಮರು ಜೀವ ನೀಡಿ, ಆ ಮೂಲಕ ಸಮಸ್ತ ದಲಿತ ಸಮುದಾಯವನ್ನು ಒಡೆಯಲು ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಎಚ್ಚರಿಕೆ ನೀಡಲು, ಕಪ್ಪು ಬಾವುಟ ಪ್ರದರ್ಶಿಸಲು ನಾವು ಪ್ರಯತ್ನಿಸಿದಾಗ, ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ ಎಂದು ಡಾ. ಬಾಬುರಾಜೇಂದ್ರ ನಾಯ್ಕ್ ಕಿಡಿಕಾರಿದ್ರು.  ಸಿದ್ದರಾಮಯ್ಯನವರು ದಲಿತ ಸಮುದಾಯವನ್ನು ಒಡೆಯುವ ದುರಾಲೋಚನೆ ಬಿಡದಿದ್ದರೆ, ಇನ್ನು ಮುಂದೆ ಅವರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಿಗೂ ತೆರಳಿ, ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಅಷ್ಟೇ ಅಲ್ಲ, ಅವರ ಕಾರ್ಯಕ್ರಮ ನಡೆಯಲೂ ಬಿಡುವುದಿಲ್ಲ. ದಲಿತ ಸಮುದಾಯವನ್ನು, ಅದರಲ್ಲೂ ಹಿಂದುಳಿದ ದಲಿತ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆಸುತ್ತಿರುವ ಸಿದ್ದರಾಮಯ್ಯನವರಿಗೆ ನಮ್ಮ ಧಿಕ್ಕಾರವಿದೆ” ಎಂದು ಡಾ. ಬಾಬುರಾಜೇಂದ್ರ ನಾಯ್ಕ್ ಎಚ್ಚರಿಕೆ ನೀಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಬಂಜಾರ ಯುವಕರು ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಂತೆ, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪೊಲೀಸರ ಕ್ರಮವನ್ನು ಪ್ರತಿಭಟಿಸಿದ ಬಂಜಾರ ಪ್ರತಿಭಟನಾಕಾರರು, ನ್ಯಾಯ ನೀಡಬೇಕಾಗಿರುವ ಸರ್ಕಾರ ನ್ಯಾಯ ಕೋರುವವರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ನಡೆಗಳ ಮೂಲಕ ಕಾಂಗ್ರೆಸ್ ಸರಕಾರ ತಾನು ಜನ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಬಸವರಾಜ್ ಚೌಹಾಣ್, ರಾಕೇಶ ರಜಪೂತ್, ಶಿವರಾಜ ರಾಠೋಡ್, ಶಿವಾನಂದ ಲಮಾಣಿ, ಮೋಹನ್ ಚವಾಣ್, ಕೃಷ್ಣ ಜಾಧವ್, ಪವನ್ ಕುಮಾರ್ ಲಮಾಣಿ ಸೇರಿದಂತೆ ಹಲವಾರು ಪ್ರತಿಭಟನಾಕಾರರು ಉಪಸ್ಥಿತರಿದ್ದು, ಬಂಧನಕ್ಕೊಳಗಾದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments