ಬೀದರ್ : ಬೀದರ್ ನಗರದ ವಿಜಯ್ ಸ್ಪೆಷಾಲಿಟಿ ಆಸ್ಪತ್ರೆ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಬಂಜೆತನ ನಿವಾರಣೆ ಹೆಸ್ರಲ್ಲಿ ಚೆಲ್ಲಾಟವಾಡುತ್ತಿರೋ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಚಿಕಿತ್ಸೆಗೆಂದು ಬಂದ ಮಹಿಳೆಯರ ಪರಿಸ್ಥಿತಿ ಉಂಡು ಹೋದ ಕೊಂಡು ಹೋದ ಎಂಬಂತಾಗಿದೆ.
ಲಕ್ಷ ಲಕ್ಷ ಹಣ ಖರ್ಚು ಮಾಡಿ ಬಂಜೆತನ ನಿವಾರಣೆ ಕನಸು ಹೊತ್ತು ಬಂದವರಿಗೆ ಇದೀಗ ವೈದ್ಯರಿಂದ ಡಬಲ್ ಶಾಕ್… ಹೈಡೊಸ್ ಇಂಜೆಕ್ಷನ್ ಪರಿಣಾಮ ಬೇರೆ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ಜನರು ದೂರುತ್ತಿದ್ದಾರೆ. ಓರ್ವ ಮಹಿಳೆಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ. ಮತ್ತೋರ್ವ ಮಹಿಳೆಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದು, ಇದೂವರೆಗೂ 7 ಲಕ್ಷ ಖರ್ಚಾಗಿದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಒಂದೆಡೆ ಬಂಜೆತನವೂ ನಿವಾರಣೆಯಾಗಲಿಲ್ಲ, ಮತ್ತೊಂದು ಕಡೆ ಹೊಸ ಸಮಸ್ಯೆ ಕಾಣಿಸಿಕೊಳ್ತಿದೆ. ಈ ಬಗ್ಗೆ ವೈದ್ಯರನ್ನ ಕೇಳಿದ್ರೆ, ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂದು ನೊಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಮ್ಮ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದ್ದಾರೆ. ಮಹಿಳೆಯರ ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಇಂತಹ ಖಾಸಗಿ ಆಸ್ಪತ್ರೆಗಳ ಮೇಲೆ ಇನ್ನಾದ್ರೂ ಹದ್ದಿನ ಕಣ್ಣಿಟ್ಟು ಅಮಾಯಕ ಹೆಣ್ಣು ಮಕ್ಕಳನ್ನ ರಕ್ಷಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ.