ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಪಂದ್ಯದಲ್ಲೂ ಭಾರತಕ್ಕೆ ಹೀನಾಯ ಸೋಲು ಎದುರಾಗಿದ್ದು, ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 2-1 ಮುನ್ನಡೆ ಸಾಧಿಸಿದೆ.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 339 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 2ನೇ ಇನ್ನಿಂಗ್ಸ್ ನ ಆರಂಭದಿಂದಲೂ ರನ್ ಗಳಿಸಲು ತಿಣುಕಾಡಿತು.
ಭಾರತದ ಪರ ಯಶಸ್ವಿ ಜೈಸ್ವಾಲ್ 84 ರನ್ ಮತ್ತು ರಿಷಬ್ ಪಂತ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ಕೂಡ ದಾಟಲಿಲ್ಲ. ಆಸ್ಟ್ರೇಲಿಯಾದ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ಮಣಿದ ಭಾರತ ಅಂತಿಮವಾಗಿ ಕೇವಲ 155 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 184ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಭಾರತದ ಯಶಸ್ವಿ ಜೈಸ್ವಾಲ್ 84 ರನ್, ರಿಷಭ್ ಪಂತ್ 30 ರನ್ ಹೊಡೆದರೆ ಇತರೇ ರೂಪದಲ್ಲಿ 12 ರನ್( ಬೈ 5, ಲೆಗ್ ಬೈ 5, ನೋಬಾಲ್ 2) ಬಂದಿತ್ತು. 8 ಆಟಗಾರರು ಎರಡಂಕಿ ದಾಟಲು ವಿಫಲರಾದರು.
ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಸ್ಕಾಟ್ ಬೊಲಾಂಡ್ ತಲಾ ಮೂರು ವಿಕೆಟ್ ಪಡೆದರೆ ನಥನ್ ಲಿಯಾನ್ 2, ಮಿಶೆಲ್ ಸ್ಟ್ರಾಕ್ ಮತ್ತು ಟ್ರಾವಿಸ್ ಹೆಡ್ ತಲಾ ಒಂದೊಂದು ವಿಕೆಟ್ ಪಡೆದರು.