ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ದೊಡ್ಡತೋಗೂರು ಗ್ರಾಮದ ಸರ್ವೆ ನಂಬರ್ 105 ರ 7.20 ಗುಂಟೆ ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕಂದಾಯ ಭವನದ ಅಂಗಳದಿಂದ ಮತ್ತೊಂದು ಭಾರಿ ಭೂಹಗರಣ ಹೊರಬಿದ್ದಿದೆ.
ಉತ್ತರಹಳ್ಳಿ ಹೋಬಳಿ ದೊಡ್ಡಕಲ್ಲಸಂದ್ರ ಗ್ರಾಮದ ಹಳೆಯ ಸರ್ವೆ ನಂ.15/ಪಿ-4, ಹೊಸ ಸರ್ವೆ ನಂ.15ರ 8 ಎಕರೆ ಜಮೀನನ್ನು ಶಿವಲಿಂಗಮ್ಮ ಎಂಬುವವರಿಗೆ ಖಾತೆ ಮಾಡಿಕೊಡಲಾಗಿದೆ. ಈ ಪರಭಾರೆ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಸ್ಫೋಟಕ ಮಾಹಿತಿ ಬಯಲಾಗಿದೆ.
ಮಾಜಿ ಡಿಸಿ ದಯಾನಂದ್, ಎಸಿ ರಜನಿಕಾಂತ್, ತಹಶೀಲ್ದಾರ್ ಶ್ರೀನಿವಾಸ್, ವಿಶೇಷ ತಹಶೀಲ್ದಾರ್ ಕೃಷ್ಣಮೂರ್ತಿ ಸೇರಿ ಅಧಿಕಾರಿಗಳ ತಂಡವು ಸತ್ತವರ ಹೆಸರಲ್ಲಿ ಖಾತೆ ಮಾಡಿ ಭಾರಿ ಎಡವಟ್ಟು ಮಾಡಿದೆ.
ದಕ್ಷಿಣ ಉಪ ವಿಭಾಗಾಧಿಕಾರಿಯಾಗಿದ್ದ ರಜನಿಕಾಂತ್ ಎಂಬುವವರು ಶಿವಲಿಂಗಮ್ಮ ನವರು ಯಾರೆಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಡತದಲ್ಲಿ ನಮೂದಿಸಿ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ಅರ್ಜಿದಾರರು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಭಾರಿ ಪ್ರಮಾದ ನಡೆದಿದ್ದು, ಡೂಪ್ಲಿಕೇಟ್ ಮಿಸ್ಸಿಂಗ್ ರೆಕಾರ್ಡ್ ಕ್ರಿಯೇಟ್ ಮಾಡಿ ಒತ್ತಡ ತಂದು ವಾಸ್ತವಕ್ಕೆ ವಿರುದ್ಧವಾದ ಆದೇಶ ಮಾಡಲಾಗಿದೆ. ಈ ಡೆಡ್ಲಿ ಡೂಪ್ಲಿಕೇಟ್ RTC ಸ್ಕ್ಯಾಮ್ ಹಿಂದೆ ಭೂಮಾಫಿಯಾದ ಕೈವಾಡವಿದ್ದು, ನೂರಾರು ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವ ಬಗ್ಗೆ ಸರ್ಕಾರಕ್ಕೆ ದೂರು ದಾಖಲಾಗಿದೆ. ಉತ್ತರಹಳ್ಳಿ ಹೋಬಳಿಯ ಈ ಆಸ್ತಿಗೆ ಸುಮಾರು 800 ಕೋಟಿ ರೂ. ಮೌಲ್ಯವಿದೆ. ಈ ಸ್ವತ್ತಿನ ಮೇಲೆ ಭೂಗಳ್ಳರ ಕಣ್ಣಿತ್ತು. ಈ ಆದೇಶದ ಹಿಂದೆ ಭಾರಿ ಪ್ರಮಾಣದ ಲಂಚದ ವಹಿವಾಟು ನಡೆದಿದೆ ಎಂದು ಸರ್ಕಾರಕ್ಕೆ ದೂರು ನೀಡಲಾಗಿದೆ. ಈ ಕಡತದ ಸಂಪೂರ್ಣ ದಾಖಲೆಗಳು ಫ್ರೀಡಂ ಟಿವಿಗೆ ಲಭ್ಯವಾಗಿವೆ.