ಹುಬ್ಬಳ್ಳಿ: ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಮತ್ತೊಂದು ಶಾಕಿಂಗ್ ಬೆಳವಣಿಗೆಯಾಗಿದೆ. ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ.ನಂಜುಂಡಿ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಹುಬ್ಬಳ್ಳಿ ನಿವಾಸಕ್ಕೆ ಭೇಟಿ ನೀಡಿದ ಕೆ.ಪಿ.ನಂಜುಂಡಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಸಭಾಪತಿ ರಾಜೀನಾಮೆ ಅಂಗೀಕರಿಸಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿದ ಅವರು, ನಿರ್ಲಕ್ಷಕ್ಕೊಳಗಾದ ಕಾಯಕ ಸಮಾಜದ ಏಳ್ಗೆಗೆ ನಾನು ರಾಜಕೀಯಕ್ಕೆ ಬಂದೆ.ಕಾಯಕ ಸಮಾಜ ಉಳಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಬಿಜೆಪಿಗೆ ಬಂದಿದ್ದೆ. ಆದರೆ ಮುಖಂಡರು ಒಂದೇ ಒಂದು ದಿವಸ ಕಾಯಕ ಸಮಾಜದ ಬಗ್ಗೆ ಮಾತಾಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮಾಜಕ್ಕೆ ಏನೂ ಸ್ಪಂದಿಸಿಲ್ಲ. ನನ್ನನ್ನು ಎಮ್ಎಲ್ಸಿ ಮಾಡಿ ಸುಮ್ಮನಾದರು, ಏನೂ ಜವಾಬ್ದಾರಿ ಕೊಡಲಿಲ್ಲ. ರಾಜಿನಾಮೆ ಕೊಡುವಂತೆ ಎರಡು ವರ್ಷದಿಂದ ನಮ್ಮ ಸಮಾಜದ ಒತ್ತಡವಿತ್ತು. ನನಗೆ ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ಬೆಲೆಯಿಲ್ಲವಾಗಿದೆ. ಹೀಗಾಗಿ ನಾನು ಎಮ್ಎಲ್ಸಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದೇನೆ. ಅದರ ಜೊತೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇದೇವೇಳೆ ರಾಜೀನಾಮ ಅಂಗೀಕರಿಸಿದ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಮಾತನಾಡಿ, ಕೆ.ಪಿ. ನಂಜುಂಡಿ ರಾಜಿನಾಮೆ ಅಂಗೀಕರಿಸಿದ್ದೇನೆ ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಸಭಾಪತಿ ಅವಧಿಯಲ್ಲಿ 13 ಜನ ರಾಜಿನಾಮೆ ಕೊಟ್ಟಿದ್ದಾರೆ. ರಾಜಕೀಯದಲ್ಲಿ ಎಥಿಕ್ಸ್ ಈಗ ಕಡಿಮೆಯಾಗಿದೆ. ದುಡ್ಡೊಕೊಟ್ಟು, ತೆಗೆದುಕೊಂಡು ಓಟ್ ಹಾಕುವವರೆಗೆ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ. ಹಿಂದೆ ಸಂಗೀತಗಾರರು, ಸಾಹಿತಿಗಳು ಪರಿಷತ್ನಲ್ಲಿ ಇರುತ್ತಿದ್ದರು. ಹಣ, ತೋಳ್ಬಲದ ರಾಜಕೀಯ ನಡೆಯುತ್ತಿದೆ. ಸಂವಿಧಾನ ದುರುಪಯೋಗ ಆಗಬಾರದು, ಗೌರವಿಸುವ ಕೆಲಸ ಮಾಡಬೇಕು ಎಂದರು.


