Top Newsರಾಜ್ಯಸುದ್ದಿ

ಪಂಚಾಯತಿಗಳು, ಅನುಷ್ಠಾನ ಇಲಾಖೆಗಳಿಗೆ ನರೇಗಾ ಪ್ರಶಸ್ತಿ ಘೋಷಣೆ

ಬೆಂಗಳೂರು: ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾದಲ್ಲಿ 2023-24ನೇ ಸಾಲಿನ ಅತ್ಯುತ್ತಮ ಸಾಧನೆ ಮಾಡಿದ ಪಂಚಾಯತಿಗಳು ಮತ್ತು ಅನುಷ್ಠಾನ ಇಲಾಖೆಗಳಿಗೆ ನರೇಗಾ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರಕ್ಕೆ, ಬೆಂಗಳೂರು ವಿಭಾಗೀಯ ದಾವಣಗೆರೆ ಜಿಲ್ಲಾ ಪಂಚಾಯಿತಿ, ಬೆಳಗಾವಿ ವಿಭಾಗೀಯ ಜಿಲ್ಲಾ ಪಂಚಾಯಿತಿ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ, ಕಲಬುರಗಿ ವಿಭಾಗೀಯ ಜಿಲ್ಲಾ ಪಂಚಾಯಿತಿ, ಬಳ್ಳಾರಿ ಜಿಲ್ಲಾ ಪಚಾಯಿತಿ ಹಾಗೂ ಮೈಸೂರು ವಿಭಾಗೀಯ ಜಿಲ್ಲಾ ಪಂಚಾಯಿತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗಳು ಆಯ್ಕೆಯಾಗಿದೆ.

2023-24ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 13.85 ಕೋಟಿ ಮಾನವ ದಿನಗಳ ಕೆಲಸವನ್ನು 30 ಲಕ್ಷ ಕುಟುಂಬಗಳ 54 ಲಕ್ಷಕ್ಕೂ ಹೆಚ್ಚು ಕೂಲಿಕಾರರಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 11 ಕೋಟಿ ಮಾನವ ದಿನಗಳ ಕೆಲಸವನ್ನು 26.78 ಲಕ್ಷ ಕುಟುಂಬಗಳ 47.27 ಲಕ್ಷಕ್ಕೂ ಹೆಚ್ಚು ಕೂಲಿಕಾರರಿಗೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, 2023-24ನೇ ಸಾಲಿನಲ್ಲಿ 9.5 ಲಕ್ಷ ಕಾಮಗಾರಿಗಳನ್ನು ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 8.30 ಲಕ್ಷ ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ತಮ್ಮ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ 1.13 ಲಕ್ಷ ಎಕರೆ ತೋಟಗಾರಿಕೆ ಬೆಳೆ ವಿಸ್ತರಣೆ, 0.16 ಲಕ್ಷ ಎಕರೆ ರೇಷ್ಮೆ ಹಾಗೂ 0.37 ಲಕ್ಷ ಜಾನುವಾರು ಶೆಡ್‌ ನಿರ್ಮಾಣಕ್ಕೂ ಕೂಡ ಅವಕಾಶ ನೀಡಲಾಗಿದೆ.

ನರೇಗಾ ಯೋಜನೆಯ ಅನುಷ್ಠಾನವನ್ನು ಪರಿಣಾಮಕಾರಿಯಾಗಿಸಲು ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ, ಕಾಮಗಾರಿಗಳ ಸಾಮಗ್ರಿ ವೆಚ್ಚದ ಎಫ್‌ಟಿಓಗಳನ್ನು ಸೃಜಿಸುವ ಮುನ್ನ ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಿ ಕಾಮಗಾರಿಗಳು ಭೌತಿಕವಾಗಿ ಸೃಜನೆಯಾಗಿರುವ ಖಾತ್ರಿಯೊಂದಿಗೆ ಸಾಮಗ್ರಿ ವೆಚ್ಚವನ್ನು ಬಿಡುಗಡೆಗೊಳಿಸುವ ಕ್ರಮವನ್ನು ಜಾರಿಗೆ ತರಲಾಗಿದೆ.

ಜಿಲ್ಲೆಗಳಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಗ್ರಾಮೀಣಾಭಿವೃದ್ಧಿ ಕಾಮಗಾರಿ ಅನುಷ್ಠಾನದಲ್ಲಿ ನಾವೀನ್ಯತೆಯನ್ನು ಹಾಗೂ ಉತ್ತಮ ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಿಸಿದ ಜಿಲ್ಲೆಗಳಿಗೆ ನರೇಗಾ ಪ್ರಶಸ್ತಿ ನೀಡಲಾಗುತ್ತಿದೆ.

Comments (0)

Your email address will not be published. Required fields are marked *

Back to top button