ಬೆಂಗಳೂರು: ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್ ಕುಮಾರ್ ಅವರನ್ನ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.. ಅನ್ನಪೂರ್ಣೇಶ್ವರಿನಗರ ನಿವಾಸಿ ಹೇಮಂತ್ ಕುಮಾರ್ (34) ಬಂಧಿತ ಆರೋಪಿ. ಕಿರುತೆರೆ ನಟಿ, ಬಿಗ್ ಬಾಸ್ 11ರ ಸ್ಪರ್ಧಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಿರುತೆರೆಯಲ್ಲಿ ನಟಿಸುತ್ತಿರುವ ನಟಿಗೆ 2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾದ ಆರೋಪಿ, ರಿಚ್ಚಿ ಎಂಬ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನೀವು ನಾಯಕಿಯಾಗಿ ನಟಿಸಬೇಕು ಎಂದುನಟಿಗೆ ಹೇಳಿದ್ದಾನೆ. ಅದಕ್ಕೆ ಒಪ್ಪಿಕೊಂಡು ನಟಿಗೆ 2 ಲಕ್ಷ ರೂ. ಸಂಭಾವನೆ ನೀಡುತ್ತೇನೆಂದು ಒಪ್ಪಂದ ಮಾಡಿಕೊಂಡಿದ್ದರು.
ಮುಂಗಡವಾಗಿ ನಟಿಗೆ 60 ಸಾವಿರ ರೂ.ಕೊಡಲಾಗಿತ್ತು. ಅದರಂತೆ ಚಿತ್ರೀಕರಣ ಆರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣವನ್ನು ಆರೋಪಿ ಮುಂದೂಡಿದ್ದ. ಬಳಿಕವೂ ಸಿನಿಮಾದಲ್ಲಿ ನಟಿಸುತ್ತಿದ್ದೆ. ಆದರೆ, ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಒತ್ತಾಯಿಸಿದ್ದ. ಅಲ್ಲದೆ, ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದ. ಒಪ್ಪಂದದ ಅವಧಿ ಮುಗಿದಿದ್ದರಿಂದ ಸಿನಿಮಾ ಚೇಂಬರ್ ಸಮ್ಮುಖದಲ್ಲಿ ಅವಧಿ ವಿಸ್ತರಣೆ ಮಾಡಿದ್ದರಿಂದ ಸಿನಿಮಾ ಪೂರ್ತಿಗೊಳಿಸಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೂ ಮುಂಬೈನಲ್ಲಿ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆ. ಬಳಿಕ ಬೇರೆ ಕಡೆ ಸಿನಿಮಾ ಪ್ರಚಾರಕ್ಕೆ ಒಬ್ಬಳೇ ಬರುವಂತೆ ಪೀಡುಸುತ್ತಿದ್ದ. ಅದಕ್ಕೆ ನಿರಾಕರಿಸಿದಾಗ, ನನ್ನ ಹಿಂದೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾನೆ. ಇನ್ನು ರಿಚ್ಚಿ ಸಿನಿಮಾದ ಕೆಲವು ಸೆನ್ಸಾರ್ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೆ ಎಂದು ನಟಿ ದೂರಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಬಾಕಿ ಹಣದ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು.
ಅದನ್ನು ಪ್ರಶ್ನಿಸಿದಾಗ, ನನ್ನ ಮೊಬೈಲ್ ಸಂಖ್ಯೆ ಇರುವ ಒಪ್ಪಂದದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಹತ್ತಾರು ಮಂದಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಸಿನಿಮಾ ಪ್ರಚಾರಕ್ಕೆ ನಿರಾಕರಿಸಿದಾಗ ನನಗೂ ಮತ್ತು ನನ್ನ ತಾಯಿಗೂ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಮಧ್ಯೆ 2025ರ ಸೆ.17ರಂದು ಮದ್ಯದ ಅಮಲಿನಲ್ಲಿ ಕರೆ ಮಾಡಿ, ನನ್ನ ತಾಯಿ ಹಾಗೂ ನನಗೆ ಪ್ರಾಣ ಬೆದರಿಕೆ ಹಾಕಿದಲ್ಲದೆ, ಕೆಲವು ರೌಡಿಗಳನ್ನು ನನ್ನ ಹಿಂದೆ ಕಳುಹಿಸಿ ಭಯಗೊಳಿಸಿದ್ದಾರೆ.
ಹೀಗಾಗಿ ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹಾಕಿ, ತಾಯಿ, ನನಗೆ ಪ್ರಾಣ ಬೆದರಿಕೆ ಹಾಕಿದಲ್ಲದೆ, ಹಣ ಪಾವತಿಸದೆ ವಂಚಿಸಿದ ಹೇಮಂತ್ ಕುಮಾರ್ವಿರುದ್ಧ ನಟಿ ದೂರು ನೀಡಿದ್ದರು. ಆರೋಪಿ ಇದೇ ರೀತಿ ಸಿನಿಮಾ ಮಾಡುವುದಾಗಿ ಕೆಲ ನಟಿಯರನ್ನು ದುರಪಯೋಗ ಪಡಿಸಿಕೊಂಡಿರುವ ಆರೋಪವಿದೆ. ಸದ್ಯ ನಟಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


