ಮೈಸೂರು ; ಅಡಿಕೆ ಮರಗಳನ್ನು ಕಡಿದ ಸುಳ್ಳು ಆರೋಪ ಹೊರಿಸಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮಗಳನ್ನು ಮದುವೆ ಮಾಡಿಕೊಡುವುದಾಗಿ 25 ಲಕ್ಷ ರೂ. ಹಣ ಪಡೆದು ವಂಚಿಸಿ ಅಡಿಕೆ ಮರ ಕಡಿದಿರುವುದಾಗಿ ಸುಳ್ಳು ಆರೋಪ ಹೊರಿಸಿರುವ ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಡೇಮನಗುನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶ್, ಲಕ್ಷ್ಮಿ ವಂಚಿಸಿದ ಕುಟುಂಬದವರು. ವೆಂಕಟೇಶ್ ಕಳೆದ ವರ್ಷ ಮಗಳನ್ನು ಮದುವೆ ಮಾಡಿಕೊಡುವುದಾಗಿ ಅಶೋಕ್ ಎಂಬ ವ್ಯಕ್ತಿಗೆ ಒಪ್ಪಿಗೆ ನೀಡಿದ್ದರು.
ಆದರೆ ಕೊನೆಗೆ ಮದುವೆಗೆ ಒಪ್ಪದೆ 2023ರ ಆಗಸ್ಟ್ 10 ರಲ್ಲಿ ಅಶೋಕ್ ಮೇಲೆ 850 ಅಡಿಕೆ ಮರ ಕಡಿದಿದ್ದ ಸುಳ್ಳು ಆರೋಪವನ್ನು ಕುಟುಂಬ ಮಾಡಿತ್ತು.
ಒಪ್ಪಂದದ ನಂತರ ಅಶೋಕ್ ಬಳಿ ಹುಡುಗಿ ಎರಡು ಲಕ್ಷ ಹಣ ಪಡೆದಿದ್ದು, ಆಕೆಯ ತಂದೆ 15 ಲಕ್ಷ ರೂ. ತಾಯಿ 8 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಒಪ್ಪಂದದ ನಂತರ ಒಂದು ವರ್ಷದ ಅಂತರದಲ್ಲಿ 25 ಲಕ್ಷ ರೂ. ಹಣವನ್ನು ಕುಟುಂಬ ವಸೂಲಿ ಮಾಡಿದೆ. ಹಣ ಪಡೆದ ಬಳಿಕ ಒಪ್ಪಿಗೆಯಂತೆ ಮದುವೆ ಮಾಡಿಕೊಡುವಂತೆ ಅಶೋಕ್ ಕೇಳಿದಾಗ ಕುಟುಂಬ ಹಿಂದೇಟು ಹಾಕಿದೆ.
ಕೊನೆಗೆ ಅಶೋಕ್ ತಾನು ನೀಡಿದ ಹಣ ವಾಪಸ್ ನೀಡುವಂತೆ ಕೇಳಿದಾಗ ಆತನ ಮೇಲೆ 850 ಅಡಿಕೆ ಮರ ಕಡಿದಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಹೊರ ಬಂದ ಅಶೋಕ್ ಮೋಸಗಾರರ ವಿರುದ್ಧ ಇದೀಗ ತಿರುಗಿ ಬಿದ್ದಿದ್ದು, ದಾಖಲೆಗಳ ಸಮೇತ ಕುಟುಂಬದ ಕಳ್ಳಾಟವನ್ನು ಬಯಲು ಮಾಡಿದ್ದಾರೆ.
ಹುಡುಗಿ ಕುಟುಂಬಕ್ಕೆ ಹಣ ಕೊಟ್ಟಿರುವುದರ ಬಗ್ಗೆ ಹುಡುಗಿ ಹಾಗೂ ಅಶೋಕ್ ನಡುವೆ ನಡೆದಿದ್ದ ವಾಟ್ಸಪ್ ಮೆಸೇಜ್ಗಳ ದಾಖಲೆಯನ್ನು ಸಲ್ಲಿಸಿದ್ದಾರೆ. ಹುಡುಗಿ ಕುಟುಂಬದ ಕಳ್ಳಾಟದ ಬಗ್ಗೆ ದಾಖಲೆಗಳ ಸಮೇತ ಅಶೋಕ್ ಬಯಲು ಮಾಡಿದ್ದಾರೆ. ಘಟನೆ ಸಂಭಂದ ಆರೋಪಿಗಳ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.