ಚಿಕ್ಕೋಡಿ : ಹೆತ್ತ ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ತಾನಪುರ ಗ್ರಾಮದಲ್ಲಿ ಬುಧವಾರ ಮುಂಜಾನೆ 11 ಗಂಟೆಗೆ ನಡೆದಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಸುಲ್ತಾನಪುರ ಗ್ರಾಮದ ಹೊರವಲಯದ ಬಾವಿಯಲ್ಲಿ ಮುಂಜಾನೆ 11 ಗಂಟೆಗೆ ಸರಸ್ವತಿ ನಿತಿನ್ ಕಿರವೆ(26) ತನ್ನ ಇಬ್ಬರು ಹೆಣ್ಣು ಮಕ್ಕಳಾದ ದೀಪಿಕಾ(7) ಹಾಗೂ ರಿತಿಕಾ (4) ಅವರೊಂದಿಗೆ ಬಾವಿಗೆ ಹಾರಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ನಿತಿನ್ ಕಿರವೆ ಎಂಬಾತ ನೊಂದಿಗೆ 2016ರಲ್ಲಿ ರಾಯಬಾಗ ತಾಲೂಕು ಸುಲ್ತಾನಪುರ ಗ್ರಾಮದ ಸರಸ್ವತಿಯ ಮದುವೆಯಾಗಿತ್ತು. ದಂಪತಿಗೆ ಎರಡು ಹೆಣ್ಣು ಮಕ್ಕಳಾದವು. ಗಂಡನ ಮನೆಯವರ ಕಿರುಕುಳದಿಂದ ಕಳೆದ 8 ತಿಂಗಳ ಹಿಂದೆ ಸರಸ್ವತಿ ಕಿರವೆ ಸುಲ್ತಾನಪುರ ಗ್ರಾಮದ ತವರು ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಳು. ಗಂಡನ ಮನೆಯಲ್ಲಿ ಕಿರುಕುಳದಿಂದ ತವರುಮನೆ ಸೇರಿದ ಸರಸ್ವತಿ ಮಾನಸಿಕವಾಗಿ ಕುದ್ದು ಮಕ್ಕಳನ್ನು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.