ಕ್ರೈಂ ಸ್ಟೋರಿಸುದ್ದಿ

ನಾಲ್ಕು ದಿನ ಮುಚ್ಚಿದ್ದ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ವ್ಯಕ್ತಿಯ ಶವ ಪತ್ತೆ!

ಉತ್ತರ ಪ್ರದೇಶ: ಲಕ್ನೋದ ಬಕ್ಷಿ ಕಾ ತಾಲಾಬ್ ಪ್ರದೇಶದಲ್ಲಿ ಅಕ್ಷರಶಃ ಸಿನಿಮೀಯ ಶೈಲಿಯ ಘಟನೆಯೊಂದು ನಡೆದಿದ್ದು, ಮುಚ್ಚಿದ್ದ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವುದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಜಿಸಿಆರ್‌ಜಿ ಕಾಲೇಜಿನ ಮುಂಭಾಗದಲ್ಲಿರುವ ಈ ಬಿರಿಯಾನಿ ಅಂಗಡಿಯು ಕಳೆದ ನಾಲ್ಕು ದಿನಗಳಿಂದ ಮಾಲೀಕನ ಮನೆಯಲ್ಲಿನ ವೈಯಕ್ತಿಕ ಕಾರಣದಿಂದಾಗಿ ಮುಚ್ಚಲ್ಪಟ್ಟಿತ್ತು. ಭಾನುವಾರ ಬೆಳಿಗ್ಗೆ ಅಂಗಡಿ ಮಾಲೀಕ ವ್ಯಾಪಾರಕ್ಕಾಗಿ ಶಟರ್ ತೆರೆದಾಗ ಫ್ರೀಜರ್‌ನೊಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮಿಸ್ಟರಿ ಪ್ರಕರಣದ ತನಿಖೆ ಆರಂಭಿಸಿರುವ ಲಕ್ನೋ ಪೊಲೀಸರಿಗೆ ಹಲವು ಪ್ರಶ್ನೆಗಳು ಸವಾಲಾಗಿ ಪರಿಣಮಿಸಿವೆ. ಬೀಗ ಹಾಕಿದ ಅಂಗಡಿಯೊಳಗೆ ವ್ಯಕ್ತಿ ಪ್ರವೇಶ ಮಾಡಿದ್ದು ಹೇಗೆ ಮತ್ತು ಆತ ತಾನಾಗಿಯೇ ಫ್ರೀಜರ್ ಒಳಗೆ ಹೋದನೇ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನು ಅಲ್ಲಿ ಅಡಗಿಸಿಟ್ಟಿದ್ದಾರೆಯೇ ಎಂಬುದು ಸದ್ಯದ ದೊಡ್ಡ ಕುತೂಹಲವಾಗಿದೆ. ಸ್ಥಳಕ್ಕೆ ಧಾವಿಸಿರುವ ಬೆರಳುಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಆರಂಭದಲ್ಲಿ ಕಷ್ಟಕರವಾಗಿತ್ತಾದರೂ, ತೀವ್ರ ಶೋಧದ ನಂತರ ಆತ ಸ್ಥಳೀಯ ನಿವಾಸಿ ಎಂದು ತಿಳಿದುಬಂದಿದೆ ಎನ್ನಲಾಗಿದೆ. ಅಂಗಡಿಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ಅಂಗಡಿಯ ಹತ್ತಿರ ಯಾರಾದರೂ ಸುಳಿದಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಕೊಲೆಯಂತೆ ಕಂಡುಬರುತ್ತಿದ್ದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ಮತ್ತು ಸಮಯದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button