ಮಡಿಕೇರಿ: ಕೊಡಗಿನ ಗ್ರಾಮೀಣ ಭಾಗದ ಜನರಿಗೆ ಜೀವನ ನಡೆಸೋದೆ ದುಸ್ತರವಾಗಿದೆ. ಬೆಳೆದ ಬೆಳೆಯನ್ನ ರಕ್ಷಿಸಿಕೊಳ್ಳಬೇಕೋ? ಜೀವ ಉಳಿಸಿಕೊಳ್ಳಬೇಕೋ? ಅನ್ನೋ ಆತಂಕದಲ್ಲಿ ಜನ ದಿನ ಕಳೆಯುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಏನಾಗುತ್ತದೋ ಅನ್ನೋ ಭಯ ಕಾಡುತ್ತಿದೆ.
ಆನೆ ಹಾವಳಿಯಿಂದ ಕೊಡಗಿನ ಕೆಲ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಕಳವಳಕಾರಿ ವಾತಾವರಣವಾಗಿದೆ. ಕೊಡಗಿನ ದಟ್ಟ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಆನೆಗಳ ಹಿಂಡು ಜನವಸತಿ ಪ್ರದೇಶಗಳಿಗೆ ಹೊತ್ತಿಲ್ಲದ ಹೊತ್ತಲ್ಲಿ ನುಗ್ಗುತ್ತಿವೆ. ಅದರಲ್ಲೂ ವಿರಾಜಪೇಟೆ ತಾಲ್ಲೂಕಿನ ಬಾಡಂಗ ಬಾಣಂಗಾಲ ಗ್ರಾಮದ ತೋಟ-ಗದ್ದೆಗಳಿಗೆ ನುಗ್ಗಿ ಹಾವಳಿ ಇಡುತ್ತಿರುವುದರಿಂದ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗುತ್ತಿದೆ.
ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕೆಲ ಕ್ಷಣಗಳಲ್ಲೇ ಮಣ್ಣು ಪಾಲಾಗುತ್ತಿದೆ. ಕಾಫಿ, ಏಲಕ್ಕಿ, ಬಾಳೆತೋಟ, ಅಡಿಕೆ ಗಿಡಿಗಳನ್ನು ನಾಶಮಾಡುತ್ತಿದೆ. ಇದುಮಾತ್ರವಲ್ಲ ಕಾಫಿ ತೋಟದಲ್ಲೇ ಕಾಡಾನೆ ಆಶ್ರಯ ತಾಣವಾಗಿ ಪರಿಣಮಿಸಿದೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಈ ನಡುವೆ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ ಎರಡು ದಿನಗಳ ಹಿಂದೆ ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಿದ್ರು.
ಇಂದು ಮತ್ತೆ ಗ್ರಾಮದ ಕಾಫಿ ತೋಟಗಳಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಂಡು ಬಂದಿದ್ದು, ತೋಟದ ಕಾರ್ಮಿಕರು ಕಾಫಿ ತೋಟಗಳಿಗೆ ಹೋಗಲು ಹಿಂದೆಟ್ಟು ಹಾಕುತ್ತಿದ್ದಾರೆ. ಈ ನಡುವೆ ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಕಾಡಾನೆಗಳನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಕಾಡಿಗೆ ಅಟ್ಟಲು ಛಲ ಬೀಡದೇ ಶ್ರಮಿಸುತ್ತಿದ್ದಾರೆ.