ರಾಜ್ಯಸುದ್ದಿ

ಜಮೀನು ವಿಚಾರಕ್ಕೆ ಕಿತ್ತಾಟ; ತಮ್ಮನ ತಲೆ ಒಡೆದು ಕೊಲೆ ಮಾಡಿದ ಅಣ್ಣ

ದಾವಣಗೆರೆ: ಜಮೀನು ಒತ್ತುವರಿ ವಿಚಾರಕ್ಕೆ ನಡೆದ ಅಣ್ಣ-ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ನಡೆದಿದೆ.

ಸಿ.ಕೆ ನೀಲಪ್ಪ (62) ಕೊಲೆಯಾದ ದುರ್ದೈವಿ. ಸ್ವಂತ ಅಣ್ಣ ಸಿ.ಕೆ ಚಂದ್ರಪ್ಪ ಎಂಬಾತ ತಮ್ಮನನ್ನು ಕೊಲೆ ಮಾಡಿರುವ ಆರೋಪಿ. ಕಳೆದ ಕೆಲವು ದಿನಗಳಿಂದ ಇವರಿಬ್ಬರ ನಡುವೆ ಜಮೀನು ಒತ್ತುವರಿ ವಿಚಾರವಾಗಿ ಮನಸ್ತಾಪವಿತ್ತು. ಇಂದು ಅದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ.

ಜಗಳ ವಿಕೋಪಕ್ಕೆ ತಿರುಗಿ ಚಂದ್ರಪ್ಪ ತಮ್ಮ ನೀಲಪ್ಪನ ಮೇಲೆ ಹಲ್ಲೆ ನಡೆಸಿ, ತಲೆ ಒಡೆದಿದ್ದು, ಪೆಟ್ಟು ಬಲವಾಗಿ ಬಿದ್ದ ಪರಿಣಾಮ ನೀಲಪ್ಪ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಮಾಯಕೊಂಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಚಂದ್ರಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಈ ಕೊಲೆಗೆ ಚಂದ್ರಪ್ಪ ಒಬ್ಬನೇ ಕಾರಣವಲ್ಲ, ಆತನ ಕುಟುಂಬದ ಸದಸ್ಯರು ಕೂಡ ಪ್ರಚೋದನೆ ನೀಡಿದ್ದಾರೆ ಮತ್ತು ಸಹಕರಿಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸುವಂತೆ ಅವರು ಪಟ್ಟು ಹಿಡಿದಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button