ಮೈಸೂರು : ಅಯೋಧ್ಯೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತರು ಘೇರಾವ್ ಮಾಡಿ ಪೂಜೆಗೆ ಅವಕಾಶ ಕಲ್ಪಿಸದೇ ವಾಪಸ್ ಕಳುಹಿಸಿದ ಘಟನೆ ಮೈಸೂರು ತಾಲೂಕು ಹಾರೋಹಳ್ಳಿಯಲ್ಲಿ ನಡೆದಿದೆ.
ಈ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ನಾನು ಈ ಕ್ಷಣಕ್ಕೂ ಮಹಿಷ ದಸರಾ ವಿರೋಧಿ. ಮಹಿಷಾ ದಸರಾ ವಿರೋಧ ಮಾಡಿದ್ದಕ್ಕೆ ಯಾರೋ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ಕಾಂಗ್ರೆಸ್ನ ಪುಡಾರಿಗಳಿಂದ ಗಲಾಟೆ ನಡೆದಿದೆ ಎಂದರು.
ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಚಾಮುಂಡಿ ತಾಯಿಯ ಭಕ್ತರು ಕೋಟ್ಯಾಂತರ ಇದ್ದಾರೆ. ನಾನು ಚಾಮುಂಡಿಯ ಭಕ್ತ. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತೆ ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.


