ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಹಲ್ಚಲ್ ಎಬ್ಬಿಸುವಂತಹ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ “ಕುರ್ಚಿ ಜಗಳ” ಹಾಗೂ “ಅಧಿಕಾರ ಹಂಚಿಕೆ”ಯ ಸಸ್ಪೆನ್ಸ್ಗೆ ಈಗ ತೆರೆ ಬೀಳುವ ಕಾಲ ಹತ್ತಿರ ಬಂದಂತಿದೆ. ದೆಹಲಿ ಮೂಲಗಳ ಪ್ರಕಾರ, ಫೆಬ್ರವರಿ ಅಂತ್ಯಕ್ಕೆ ರಾಜ್ಯದ ಆಡಳಿತ ಚುಕ್ಕಾಣಿಯಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂಬ ಎಕ್ಸ್ಕ್ಲೂಸಿವ್ ಮಾಹಿತಿ FREEDOM TVಗೆ ಲಭ್ಯವಾಗಿದೆ!
ಸಿದ್ದರಾಮಯ್ಯ ವಿದಾಯ ಭಾಷಣಕ್ಕೆ ಸಿದ್ಧತೆ
ಈ ಬಾರಿಯ ಬಜೆಟ್ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಕೊನೆಯ ಅಧಿವೇಶನವಾಗಲಿದೆ ಅನ್ನೋದು ಮೂಲಗಳ ಮಾಹಿತಿ. ತಮ್ಮ ರಾಜಕೀಯ ಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸಿ, ಅಧಿವೇಶನದ ಕೊನೆಯ ದಿನ ಸಿದ್ದರಾಮಯ್ಯನವರು ವಿದಾಯದ ಭಾಷಣ ಮಾಡಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಹೈಕಮಾಂಡ್ ಸೂಚನೆಯ ಮೇರೆಗೆ ಸಿದ್ದರಾಮಯ್ಯನವರು “ಒಪ್ಪಂದದ ಸೂತ್ರ”ಕ್ಕೆ ಮನಸ್ಸಿಲ್ಲದಿದ್ದರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕನಕಪುರದ ಬಂಡೆಯ ‘ಸಿಎಂ ಯೋಗ’ ಕೂಡಿಬಂತು!
ದಶಕಗಳ ಕಾಲದ ಕನಸು, ನಿರಂತರ ಪ್ರಯತ್ನ ಹಾಗೂ ದೈವಬಲ ಎರಡೂ ಕೈ ಹಿಡಿದಂತಿದೆ. “ಬಂಡೆ” ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ತಾಳ್ಮೆಗೆ ಈಗ ಪ್ರತಿಫಲ ಸಿಗುತ್ತಿದೆ. ಶಾಸಕಾಂಗ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲಿದೆ.
ಈ ಮಹಾ ಬೆಳವಣಿಗೆಯ ಹೈಲೈಟ್ಸ್:
ಸಿಎಲ್ಪಿ ಸಭೆ: ಫೆಬ್ರವರಿ ಅಂತ್ಯಕ್ಕೆ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆ ಆಯೋಜನೆ.
ಸುಸೂತ್ರ ಹಸ್ತಾಂತರ: ಗೊಂದಲಗಳಿಗೆ ಅವಕಾಶ ನೀಡದೆ ಅಧಿಕಾರ ಹಸ್ತಾಂತರಿಸಲು ಸಿದ್ದುಗೆ ಹೈಕಮಾಂಡ್ ಸೂಚನೆ.
ಪಾರ್ಥನೆಗೆ ಫಲ: ಕೇದಾರನಾಥದಿಂದ ಉಜ್ಜಯಿನಿಯವರೆಗೆ ಡಿಕೆಶಿ ನಡೆಸಿದ ಸಂಕಲ್ಪ ಫಲ ನೀಡಿದ ಕ್ಷಣ.
ಕಾಂಗ್ರೆಸ್ ಶಾಸಕರಲ್ಲಿ ಸಂಚಲನ!
ಈ ಸುದ್ದಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಶಾಸಕರೆಲ್ಲರೂ ಈ ಬಿಗ್ ನ್ಯೂಸ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬಜೆಟ್ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ಹೊಸ ಸಾರಥಿಯ ಸಾರಥ್ಯ ಆರಂಭವಾಗಲಿದೆ. ಕನಕಪುರದ ಬಂಡೆಯ ಪಟ್ಟಾಭಿಷೇಕಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ರಾಜಭವನದ ಅಂಗಳದಲ್ಲಿ ಹೊಸ ಇತಿಹಾಸ ಬರೆಯಲು ತಯಾರಿ ನಡೆದಿದೆ.


