Freedom TV

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಬ್ರಹ್ಮಾಸ್ತ್ರ; ನಿಯಮ ಮೀರಿದರೆ ಮಾನ್ಯತೆ ಶಾಶ್ವತ ರದ್ದು!

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ SSLC ಮತ್ತು ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಶಾಲೆ ಮತ್ತು ಕಾಲೇಜುಗಳ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಗೊಳಿಸುವ “ಬ್ರಹ್ಮಾಸ್ತ್ರ”ವನ್ನು ಸರ್ಕಾರ ಪ್ರಯೋಗಿಸಿದೆ.

ಖಾಸಗಿ ಶಾಲೆಗಳ ಕಳ್ಳಾಟಕ್ಕೆ ಬ್ರೇಕ್!
ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್‌ನಂತಹ ವೇದಿಕೆಗಳಲ್ಲಿ ಕೇವಲ ₹30 ರಿಂದ ₹500 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಇನ್ನು ಮುಂದೆ ಇಂತಹ ಅಕ್ರಮ ನಡೆದರೆ ನೇರವಾಗಿ ಶಿಕ್ಷಣ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಿದೆ.

ಸರ್ಕಾರದ ಕಠಿಣ ಮಾರ್ಗಸೂಚಿಗಳು:
ಮಾನ್ಯತೆ ರದ್ದು: ಪ್ರಶ್ನೆ ಪತ್ರಿಕೆ ಸೋರಿಕೆಯಾದಲ್ಲಿ ಸಂಬಂಧಪಟ್ಟ ಖಾಸಗಿ ಅನುದಾನರಹಿತ ಶಾಲಾ-ಕಾಲೇಜುಗಳ ಮಾನ್ಯತೆಯನ್ನು ನಿಯಮಗಳ ಪ್ರಕಾರ ಶಾಶ್ವತವಾಗಿ ರದ್ದುಗೊಳಿಸಲಾಗುವುದು.
ಅನುದಾನಕ್ಕೆ ಕೊಕ್ಕೆ: ಅನುದಾನಿತ ಶಿಕ್ಷಣ ಸಂಸ್ಥೆಗಳು ಗೌಪ್ಯತೆ ಕಾಪಾಡುವಲ್ಲಿ ವಿಫಲವಾದರೆ, ಸರ್ಕಾರದಿಂದ ನೀಡಲಾಗುವ ಅನುದಾನವನ್ನು ತಕ್ಷಣವೇ ಸ್ಥಗಿತಗೊಳಿಸಲು ಶಿಫಾರಸು ಮಾಡಲಾಗುವುದು.
ಪರೀಕ್ಷಾ ಕೇಂದ್ರ ರದ್ದು: ಪರೀಕ್ಷಾ ಕೇಂದ್ರವಾಗಿದ್ದ ಶಾಲೆಯಲ್ಲಿ ಅಕ್ರಮ ಕಂಡುಬಂದಲ್ಲಿ, ಅಂತಹ ಸಂಸ್ಥೆಯನ್ನು ಪರೀಕ್ಷಾ ಕೇಂದ್ರಗಳ ಪಟ್ಟಿಯಿಂದ ಕಪ್ಪುಪಟ್ಟಿಗೆ ಸೇರಿಸಲಾಗುವುದು.
ಕ್ರಿಮಿನಲ್ ಮೊಕದ್ದಮೆ: ಸೋರಿಕೆ ಕಂಡುಬಂದ ನೋಡಲ್ ಕೇಂದ್ರಗಳ ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ತಾಂತ್ರಿಕ ಕಣ್ಗಾವಲು:
ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡುವಾಗ ಒಂದೇ ಕಂಪ್ಯೂಟರ್ ಮತ್ತು ನಿಗದಿತ IP ವಿಳಾಸವನ್ನು ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಬೇರೆ IP ವಿಳಾಸದಿಂದ ಪತ್ರಿಕೆ ಡೌನ್‌ಲೋಡ್ ಆಗಿದ್ದರೆ ಅದನ್ನು ಸೋರಿಕೆ ಎಂದು ಪರಿಗಣಿಸಿ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ.
ಮುಖ್ಯ ಅಂಶ: “ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜೊತೆಗೆ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು. ಇದರಲ್ಲಿ ಲೋಪವಾದರೆ ಸಂಸ್ಥೆಯನ್ನು ಮುಚ್ಚುವ ಅಸ್ತ್ರವನ್ನು ಸರ್ಕಾರ ಬಳಸಲಿದೆ.”

Comments (0)

Your email address will not be published. Required fields are marked *

Back to top button