ಶಾಲಾ ಕೊಠಡಿಗಾಗಿ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಿದ್ದ ನಿಡಗುಂದಿಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣ ಇಲಾಖೆ ಸಸ್ಪೆಂಡ್ ಮಾಡಿದೆ.
ಮಂಗಳವಾರದ ಪ್ರತಿಭಟನೆ ವೇಳೆ ರಾಯಭಾಗ ತಹಶಿಲ್ದಾರ್ ಸುರೇಶ್ ಮುಂಜೆ ಮತ್ತು ಬಿಇಓ ಬಸವರಾಜ್ ಅಕ್ಷರಷಃ ಬೆದರಿಕೆ ಹಾಕಿದ್ದರು. ಕ್ರಮದ ಸುಳಿವು ನೀಡಿದ್ದರು. ಈ ಬಗ್ಗೆ ನಿಮ್ಮ ಫ್ರೀಡಂ ಟಿವಿ ದನಿ ಎತ್ತಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ತರುವ ಪ್ರಯತ್ನ ಮಾಡಿತ್ತು.
ಇದರ ನಡುವೆ ತರಾತುರಿಯಲ್ಲಿ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಬಿಇಓ ಬಸವರಾಜು ನೊಟೀಸ್ ಜಾರಿ ಮಾಡಿದ್ರು. ಇದಕ್ಕೆ ಉತ್ತರಿಸುವ ಮುನ್ನವೇ ವೀರಣ್ಣ ಮಡಿವಾಳರ ವಿರುದ್ಧ ಶಿಸ್ತು ಕ್ರಮವನ್ನು ಬಿಇಓ ತೆಗೆದುಕೊಂಡಿದ್ದಾರೆ. ವೀರಣ್ಣ ಮಡಿವಾಳರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸೂಕ್ಷತೆ ಹೊಂದಿರುವ ಪ್ರಬುದ್ಧರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇದನ್ನು ತಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಬಿಇಓ ಬಸವರಾಜು ಆದೇಶಕ್ಕೆ ತಡೆ ನೀಡಬೇಕು. ವೀರಣ್ಣ ಮಡಿವಾಳರ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.. ಕ್ರಮ ತೆಗೆದುಕೊಳ್ಳುವುದೇ ಆದರೇ ತಹಶೀಲ್ದಾರ್ ಮತ್ತು ಬಿಇಓ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.. ಇದು ಫ್ರೀಡಂ ಟಿವಿ ಕಳಕಳಿ..
ಆಗಿದ್ದೇನು?
ರಾಯಬಾಗದ ನಿಡಗುಂದಿಯ ಸರ್ಕಾರಿ ಶಾಲೆಯಲ್ಲಿ 146 ಮಕ್ಕಳಿದ್ದು, ಇರೋದು ಮೂರು ಕೊಠಡಿ ಮಾತ್ರ.. ಹೆಚ್ಚುವರಿ ಕೊಠಡಿಗಳು ಮಂಜೂರಾಗಿ ಮೂರು ವರ್ಷ ಕಳೆದಿದೆ.
ಆದ್ರೆ, ದೇವರು ವರ ಕೊಟ್ರೂ ಪೂಜಾರಿ ವರ ಕೊಡ ಎನ್ನುವಂತೆ ಅಧಿಕಾರಿಗಳು ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
ಹೀಗಾಗಿ ಕೊನೆಯ ಅಸ್ತ್ರವಾಗಿ ವೀರಣ್ಣ ಮಡಿವಾಳರ ಅವರು ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಫೋಟೋ ಹಿಡಿದು ಮೌನ ಹೋರಾಟಕ್ಕೆ ಇಳಿದಿದ್ದರು..
ಇದನ್ನು ಸಹಿಸದ ತಹಶೀಲ್ದಾರ್ ಮತ್ತು ಬಿಇಓ ಅವರು ವೀರಣ್ಣ ಮಡಿವಾಳರ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿ, ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ್ದರು