ಸಿಸಿಬಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ರೌಡಿಶೀಟರ್

ಮಂಗಳೂರು: ರೋಹಿದಾಸ್ ಕೆ. ಯಾನೆ ಆಕಾಶಭವನ ಶರಣ್ನನ್ನು ಮಂಗಳವಾರ ಸಂಜೆ ಶೂಟೌಟ್ ಮಾಡಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಪ್ಪು ಕುಡ್ಪಾಡಿಯಲ್ಲಿ ಆಕಾಶಭವನ ಶರಣ್ನ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಫೈರಿಂಗ್ಗೆ ಮೊದಲು ಆರೋಪಿಯು ಚೂರಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭ ಹೆಡ್ಕಾನ್ಸ್ಟೆಬಲ್ ಪ್ರಕಾಶ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಭೂಗತ ಪಾತಕಿಯೋರ್ವನ ಸಹಚರನಾಗಿದ್ದ ಶರಣ್ ಆತನ ಪರವಾಗಿ ಸುಲಿಗೆ ಮಾಡು ತ್ತಿದ್ದನೆಂಬ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಆಕಾಶಭವನ ಶರಣ್ಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಕೋಡಿಕಲ್ನ ಶೀಲಾ ಮತ್ತು ಉಡುಪಿ ಸಂತಕಟ್ಟೆಯ ಶರತ್ ಭಂಡಾರಿ ಮತ್ತಾತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಯಾನೆ ಧನು ಹಾಗೂ ಚೇತನ್ ಯಾನೆ ಬುಳ್ಳ ಎಂಬವರ ವಿರುದ್ಧ ಕಾವೂರು ಠಾಣೆಯಲ್ಲಿ ಮತ್ತು ಶಿಬಿ ಕರ್ಬಿಸ್ಥಾನ ಎಂಬಾತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ ಆಶ್ರಯ ನೀಡಿದ ಆರೋಪದಲ್ಲಿ 7 ಮಂದಿಯ ವಿರುದ್ಧ 5 ಪ್ರಕರಣ ದಾಖಲಾಗಿದೆ.




