Top Newsರಾಜ್ಯಸುದ್ದಿ

ಬೇಸಿಗೆಗೂ ಮೊದಲೇ ಕನ್ನಡಿಗರಿಗೆ ಕಾದಿದೆ ಕರೆಂಟ್ ಶಾಕ್..? ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಇನ್ನಿತರೆ ಕಂಪನಿಗಳು ವಿದ್ಯುತ್ ದರವನ್ನು ಹೆಚ್ಚಳ ಮಾಡುವ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಬೇಸಿಗೆ ಆರಂಭವಾಗೋ ಮೊದಲೇ ರಾಜ್ಯ ಸರ್ಕಾರದ ಮುಂದೆ ಇಂತಹದ್ದೊಂದು ಪ್ರಸ್ತಾವನೆ ಬಂದಿರುವುದು ಸದ್ಯ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕಾಂ) ಸಹ ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕದ ತಟ್ಟಿದೆ.

ಕಳೆದ ವರ್ಷ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ್ದ ವಿದ್ಯುತ್ ಸರಬರಾಜು ಕಂಪನಿಗಳು ಇದೀಗ ಮತ್ತೆ ವಿದ್ಯುತ್ ದರ್ ಏರಿಕೆ ಮಾಡುವಂತೆ KERCಗೆ ಪ್ರಸ್ತಾವನೆ ಸಲ್ಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಬೆಸ್ಕಾಂ ಹಾಗೂ ಸೆಸ್ಕಾಂ ಕಂಪನಿಗಳಿಂದ ವಿದ್ಯುತ್ ದರ ಏರಿಕೆಯ ಬೇಡಿಕೆ ಹೆಚ್ಚಾಗಿದ್ದು, ಕಲ್ಲಿದ್ದಲು ಖರೀದಿ,ವಿದ್ಯುತ್ ಖರೀದಿ, ಹಾಗೂ ವಿದ್ಯುತ್ ಸರಬರಾಜು ವೆಚ್ಚದ ನಿರ್ವಹಣೆಗೆ ಹೊರೆ ಹೆಚ್ಚಾಗಿದೆ. ಹೀಗಾಗಿ ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ.

ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರವನ್ನು ಇಳಿಕೆ ಮಾಡಿದ್ದರಿಂದ ಹೆಸ್ಕಾಂಗಳಿಗೆ ಆರ್ಥಿಕ ನಷ್ಟ ಅನುಭವಿಸುವಂತೆ ಮಾಡಿತ್ತು. ಹೀಗಾಗಿ ನವೆಂಬರ್ 30ರಂದು ವಿದ್ಯುತ್ ದರ ಏರಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.

ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್ ಗೆ 1.50 ಪೈಸೆಯಷ್ಟು ಹೆಚ್ಚಳ ಮತ್ತು ಇತರೆ ಎಲ್ಲಾ ಹೆಸ್ಕಾಂಗಳಿಂದ ಪ್ರತಿ ಯೂನಿಟ್ಗೆ 1.20 ಪೈಸೆ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಬಂದಿದ್ದ ಆಕ್ಷೇಪಣೆಗಳು ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ KERC ಸೂಚಿಸಿದೆ.

Comments (0)

Your email address will not be published. Required fields are marked *

Back to top button