ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೇರಳ ಸರ್ಕಾರ ಪ್ರಕಟಿಸಿತ್ತು. ಇದರಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಂದಿದ್ದವು. ಈ ರೀತಿಯ ಸಮಿತಿ ಕನ್ನಡ ಚಿತ್ರಂಗಕ್ಕೂ ಅಗತ್ಯವಿದೆ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
ಜಸ್ಟೀಸ್ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಹೀರೋಯಿನ್ಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಹಾಗೂ ಶೋಷಣೆಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ವರದಿ 2019ರಲ್ಲೇ ಸರ್ಕಾರದ ಕೈ ಸೇರಿತ್ತು. ಈಗ ವರದಿಯ ವಿಚಾರಗಳನ್ನು ಬಹಿರಂಗ ಮಾಡಲಾಗಿದೆ. ಈ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ಕನ್ನಡದ ನಟಿ ಶ್ರುತಿ ಹರಿಹರನ್ ಕೂಡ ಈ ಬಗ್ಗೆ‘ಟಿವಿ9 ಕನ್ನಡ ಡಿಜಿಟಲ್’ಗೆ ಪ್ರತಿಕ್ರಿಯೆ ನೀಡಿದ್ದು, ಕನ್ನಡದಲ್ಲಿ ಈ ರೀತಿಯ ಸಮಿತಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ನನಗೆ ಹೇಮಾ ಸಮಿತಿಯ ವರದಿ ಬಗ್ಗೆ ತುಂಬಾನೇ ಗೌರವ ಇದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು. ಈ ವಿಚಾರವನ್ನು ಆಪ್ತ ಬಳಗದಲ್ಲಿ ಕೆಲವರು ಜೋಕ್ ಕೂಡ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ’ ಎಂದಿದ್ದಾರೆ ಅವರು.
‘ಈ ವರದಿ ಮಲಯಾಳಂ ಚಿತ್ರರಂಗದ ಗೌರವ ಕಡಿಮೆ ಮಾಡುತ್ತಿದೆ, ಮಲಯಾಳಂ ಚಿತ್ರರಂಗದ ಘನತೆಗೆ ಧಕ್ಕೆ ತಂದಿದೆ’ ಎಂದು ಮಾತನಾಡಿಕೊಂಡಿದ್ದೂ ಇದೆ. ಆದರೆ, ಇದನ್ನು ಶ್ರುತಿ ಹರಿಹರನ್ ತಪ್ಪು ಎಂದಿದ್ದಾರೆ. ‘ಇದು ಖಂಡಿತವಾಗಿಯೂ ತಪ್ಪು. ಆ ರೀತಿ ನೋಡಬಾರದು. ಸಿನಿಮಾ ಕಲೆಗೆ ಸಂಬಂಧಿಸಿದ್ದು. ಅದರೊಳಗೆ ಇರುವ ಕೆಲವ ವಿಚಾರಗಳನ್ನು ಸ್ವಚ್ಛ ಮಾಡಲು ಇದು ಸರಿಯಾದ ಸಮಯ. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದಿದ್ದಾರೆ ಶ್ರುತಿ ಹರಿಹರನ್.