ಮೈಸೂರು, ಅಕ್ಟೋಬರ್ 15: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ 43 ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸ್ನೇಹಮಯಿ ಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧನ ಮಾಡಿ ವಿಚಾರ ನಡೆಸುವಂತೆ ಪಟ್ಟು ಹಿಡಿದಿದ್ದಾರೆ. ಪ್ರತಿನಿತ್ಯ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಆರೋಪ ಮಾಡಿದರು.
ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಯೋತ್ಪಾದಕರು. ಅವರನ್ನು ಭಯೋತ್ಪಾದಕರು ಅಂತ ಘೋಷಣೆ ಮಾಡಬೇಕು. ಬಿಜೆಪಿ ಹಾಗೂ ಆರ್ಎಸ್ಎಸ್ನವರು ಭಯೋತ್ಪಾದಕರು. ಬಿಜೆಪಿಯವರಿಗೆ ಮುಸ್ಲಿಮರು ಅಂದರೆ ಉರಿ. ದೇಶದಲ್ಲಿ ಮುಸ್ಲಿಮರು ಇರಬಾರದು ಅನ್ನೋದು ಬಿಜೆಪಿ ಮನಸ್ಥಿತಿ ಬಿಜೆಪಿಯ ದೊಡ್ಡ ಮಟ್ಟದ ನಾಯಕರಿಗೆ ಮುಸ್ಲಿಮರ ಜೊತೆ ವ್ಯವಹಾರ ಇದೆ. ಬಹಿರಂಗವಾಗಿ ಸುಮ್ಮನೆ ಬಿಜೆಪಿಯವರು ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.