ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಎಕರೆಗೂ ಹೆಚ್ಚು ದಾಳಿಂಬೆ ಬೆಳೆ ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಸೈದಪ್ಪ ರಾಮದುರ್ಗ ಎಂಬುವವರಿಗೆ ಸೇರಿದ ತೋಟದಲ್ಲಿ ರವಿವಾರ ಮದ್ಯಾಹ್ನ ಈ ಘಟನೆ ಸಂಭವಿಸಿದೆ. ಈ ಕುರಿತು ಫ್ರೀಡಂ ಟಿವಿಯ ಜೊತೆ ಮಾತನಾಡಿದ ರೈತ ಸೈದಪ್ಪ, ಲಕ್ಷಾನುಗಟ್ಟಲೇ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದೇವು. ಆದ್ರೆ, ಆಕಸ್ಮಿಕ ಬೆಂಕಿಯಿಂದಾಗಿ ದಾಳಿಂಬೆ ಬೆಳೆ ಸಂಪೂರ್ಣಾಗಿ ಸುಟ್ಟು ಹೋಗಿದೆ. ಸಾಕಷ್ಟು ಸಾಲ ಮಾಡಿ ದಾಳಿಂಬೆ ಬೆಳೆದಿದ್ದೆ. ಈ ರೀತಿ ಅನಾಹುತವಾದ್ದರಿಂದ ದಿಕ್ಕುತೋಚದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಫ್ರೀಡಂ ಟಿವಿ ಬಳಿ ರೈತ ಸೈದಪ್ಪ ಅಳಲು ತೋಡಿಕೊಂಡರು.
ಇನ್ನು ಈ ಘಟನೆ ಕುರಿತು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ, 3 ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದೆ. ಇದರಿಂದ ರೈತ ತೀವ್ರ ಕಂಗಾಲಾಗಿದ್ದಾನೆ. ಈ ಘಟನೆ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು. ಆ ಮೂಲಕ ರೈತನಿಗೆ ಪರಿಹಾರ ಕೊಡಿಸಬೇಕು. ಹಾಗೂ ವಡಗೇರಾ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳ ಕಚೇರಿ ಸ್ಥಾಪಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದರು.


