ರಾಜಕೀಯ

87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53ಕೋಟಿ ಉಳಿತಾಯ; ಕನ್ನಡ ಭವನ ನಿರ್ಮಾಣಕ್ಕೆ ಬಳಕೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ಕೋಟಿ ರೂ. ಹಣ ಉಳಿತಾಯವಾಗಿದೆ” ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಹಣದಲ್ಲಿ 29,65,07,226 ರೂ. ವೆಚ್ಚವಾಗಿದ್ದು, 34,92,774 ರೂ. ಸರ್ಕಾರಕ್ಕೆ ಆದ್ಯಾರ್ಪಿಸಲಾಗುವುದು” ಎಂದರು.

“ವಾಣಿಜ್ಯ ಮಳಿಗೆಗಳ ಬಾಡಿಗೆ17,52,000 ರೂ., ಪುಸ್ತಕ ಮಳಿಗೆಯ ಬಾಡಿಗೆ 16,04,000 ರೂ., ನೋಂದಣಿ ಶುಲ್ಕ 39,95,400 ರೂ., ಹೆಚ್.ಆರ್.ಎಂ.ಎಸ್ ವ್ಯಾಪ್ತಿಗೆ ಬಾರದ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ 23,11,944 ರೂ., ಹೆಚ್.ಆರ್​​.ಎಂ.ಎಸ್ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ 1,08,05,048 ರೂ., ಎಂ.ಡಿಸಿ.ಸಿ ಬ್ಯಾಂಕ್ 10 ಲಕ್ಷ ರೂ. ಹಾಗೂ ಎಂ.ಆ‌ರ್.ಎನ್ ನಿರಾಣಿ ಫೌಂಡೇಷನ್ 5 ಲಕ್ಷ ರೂ. ಸೇರಿ ಒಟ್ಟು 2,53,61,166 ರೂ. ಉಳಿತಾಯವಾಗಿದೆ” ಎಂದು ತಿಳಿಸಿದರು.

ಕನ್ನಡ ಭವನ ನಿರ್ಮಾಣ: “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ದೇಣಿಗೆ ರೂಪದಲ್ಲಿ ಸಂಗ್ರಹವಾಗಿ ಉಳಿತಾಯವಾಗಿರುವ 2.5 ಕೋಟಿ ರೂ. ಹಣವನ್ನು ವೆಚ್ಚ ಮಾಡಲು ಯೋಜಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಅದನ್ನು ಬಳಸಲಾಗುವುದು” ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಆಯೋಜನೆ ಹಾಗೂ ಹಣದ ವೆಚ್ಚ ಪಾರದರ್ಶಕವಾಗಿ ನಡೆಸಲು 28 ವಿವಿಧ ಸಮಿತಿ, ಕ್ರಿಯಾಯೋಜನೆ ತಯಾರಿಕೆ, ದರಪಟ್ಟಿ ಅನುಮೋದನೆ ಸಮಿತಿ, ಚೆಕ್ ಮೆಜರ್ ಮೆಂಟ್ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ ರಚಿಸಲಾಗಿತ್ತು. ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಅನುದಾನದಲ್ಲಿ 3,17,68,199 ರೂ. ಜಿಎಸ್​​ಟಿ ಹಾಗೂ 1,08,39,022 ಕೆ.ಎಸ್‌.ಎಂ.ಸಿ.ಎ ಸೇವಾ ಶುಲ್ಕ ಪಾವತಿಸಿದ ನಂತರ ಸಮ್ಮೇಳನಕ್ಕೆ 25,39,00,005 ರೂ. ವೆಚ್ಚವಾಗಿದೆ” ಎಂದು ವಿವರಿಸಿದರು.

Comments (0)

Your email address will not be published. Required fields are marked *

Back to top button