ರಾಜಸ್ಥಾನ: ಮೇಘಾಲಯದ ಹನಿಮೂನ್ ಮರ್ಡರ್ ಪ್ರಕರಣವನ್ನು ಮ್ಯಾಚ್ ಮಾಡುವ ಮತ್ತೊಂದು ಭೀಕರ ಹತ್ಯಾಕಾಂಡ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ ಮೂರೇ ತಿಂಗಳಿಗೆ ಅಂಜಲಿ ಎಂಬಾಕೆ ತನ್ನ ಮಾಜಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿ, ಅದಕ್ಕೆ ‘ಹಿಟ್ ಆಂಡ್ ರನ್’ ಅಪಘಾತದ ಬಣ್ಣ ಬಳಿಯಲು ಹೋಗಿ ಪೊಲೀಸರ ಅತಿಥಿಯಾಗಿದ್ದಾಳೆ.
ಅಪಘಾತವಲ್ಲ, ಇದು ಅಪ್ಪಟ ಕೊಲೆ!: ಜನವರಿ 30ರಂದು ರಾತ್ರಿ ವಾಕಿಂಗ್ ಹೋಗಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿಯಾಗಿ ತನ್ನ ಪತಿ ಆಶಿಶ್ ಮೃತಪಟ್ಟಿದ್ದಾನೆ ಹಾಗೂ ದರೋಡೆಕೋರರು ತನ್ನ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಅಂಜಲಿ ಕಥೆ ಕಟ್ಟಿದ್ದಳು. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ಅಂಜಲಿಗಾದ ಸಣ್ಣ ಗಾಯಗಳೂ ಇಲ್ಲದಿರುವುದು ಮತ್ತು ಆಕೆಯ ಹೇಳಿಕೆಗಳಲ್ಲಿನ ವ್ಯತ್ಯಾಸ ಪೊಲೀಸರ ಅನುಮಾನಕ್ಕೆ ಕಾರಣವಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಆಶಿಶ್ನ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಾಗ ರಹಸ್ಯ ಬಯಲಾಗಿದೆ.
ಪ್ರಿಯಕರನೊಂದಿಗೆ ಸೇರಿ ಸ್ಕೆಚ್: ಅಂಜಲಿ ಮದುವೆಯ ನಂತರವೂ ತನ್ನ ಮನೆಯ ಬಳಿಯಿದ್ದ ಮಾಜಿ ಪ್ರಿಯಕರ ಸಂಜು ಜೊತೆ ಸಂಬಂಧ ಮುಂದುವರಿಸಿದ್ದಳು. ಗಂಡನ ಅಡ್ಡಿಯನ್ನು ತಪ್ಪಿಸಲು ಇಬ್ಬರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು. ಪ್ಲಾನ್ ಪ್ರಕಾರ ನಿರ್ಜನ ಪ್ರದೇಶಕ್ಕೆ ಗಂಡನನ್ನು ಕರೆದೊಯ್ದ ಅಂಜಲಿ, ಅಲ್ಲಿ ಅಡಗಿದ್ದ ಸಂಜು ಮತ್ತು ಆತನ ಸಹಚರರ ಕೈಗೆ ಆಶಿಶ್ನನ್ನು ಒಪ್ಪಿಸಿದ್ದಾಳೆ. ಅವರು ಆತನನ್ನು ಅಮಾನುಷವಾಗಿ ಕೊಂದ ಬಳಿಕ ಅಪಘಾತ ಎಂದು ಬಿಂಬಿಸಲು ರಸ್ತೆಗೆ ಎಸೆದಿದ್ದರು. ಅಂಜಲಿ ಪೊಲೀಸರ ಕಣ್ತಪ್ಪಿಸಲು ತನ್ನ ಒಡವೆಗಳನ್ನು ತಾನೇ ಆರೋಪಿಗಳಿಗೆ ನೀಡಿ ದರೋಡೆ ನಾಟಕವಾಡಿದ್ದಳು.
ತಾಂತ್ರಿಕ ತನಿಖೆ ಮತ್ತು ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸಿದಾಗ ಅಂಜಲಿ ಮತ್ತು ಸಂಜು ನಡುವಿನ ನಿರಂತರ ಸಂಪರ್ಕ ಬಯಲಾಗಿದೆ. ಪೊಲೀಸರ ವಿಚಾರಣೆ ಎದುರಿಸಲಾಗದೆ ಅಂಜಲಿ ತನ್ನ ಪಾಪವನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಅಂಜಲಿ, ಪ್ರಿಯಕರ ಸಂಜು ಮತ್ತು ಇಬ್ಬರು ಸಹಚರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


