ಮಾಹಿತಿ ಅಸ್ವಸ್ಥತೆ ನಿಭಾಯಿಸುವ ಘಟಕಕ್ಕೆ ಏಳು ಕಂಪನಿಗಳು ನೊಂದಾಯಿಸಿಕೊಂಡಿದ್ದು, ಐದು ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಇಲಾಖೆಯು ಕಂಪನಿಗಳ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದು, ನಂತರ ಕಂಪನಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು ನ.20: ಸುಳ್ಳು ಸುದ್ದಿ ತಡೆಗಟ್ಟಲು ರಾಜ್ಯ ಸರ್ಕಾರ (Karnataka Government) ದಿಟ್ಟ ಹೆಜ್ಜೆ ಇಟ್ಟಿದ್ದು, ಮಾಹಿತಿ ಅಸ್ವಸ್ಥತೆ ನಿಭಾಯಿಸುವ ಘಟಕವನ್ನು (Information Disorder Tackling Unit) ಸ್ಥಾಪಿಸಲು ನಿರ್ಧರಿಸಿದೆ. ಈ ಘಟಕಕ್ಕೆ ಕಂಪನಿಗಳ ನೋಂದಣಿಗಾಗಿ ಸರ್ಕಾರ ಟೆಂಡರ್ ಕರೆದಿದೆ. ಇದೀಗ ಏಳು ಕಂಪನಿಗಳು ನೊಂದಾಯಿಸಿಕೊಂಡಿದ್ದು, ಐದು ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಇಲಾಖೆಯು ಕಂಪನಿಗಳ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದು, ನಂತರ ಕಂಪನಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಐದು ಕಂಪನಿಗಳೇ ಅಂತಿಮವಾಗುವ ಸಾಧ್ಯತೆ ಇದೆ. ಈ ಕಂಪನಿಗಳು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ನಕಲಿ ಸುದ್ದಿಗಳನ್ನು ತಡೆಯುವ ಮತ್ತು ಫ್ಯಾಕ್ಟ್ ಚೆಕ್ನಲ್ಲಿ ಸಾಕಷ್ಟು ಅನುಭವ ಹೊಂದಿವೆ ಎಂದು ಹೇಳಿದರು.
ಈ ಏಳು ಕಂಪನಿಗಳು ಮಾತ್ರ ಏಕೆ ನೋಂದಾಯಿಸಿಕೊಂಡಿವೆ ಎಂಬ ಪ್ರಶ್ನೆಗೆ, ಇದಕ್ಕೆ ನೋಂದಾಯಿಸಿಕೊಳ್ಳುವ ಕಂಪನಿಗಳು ಭಾರತೀಯ ಮೂಲದವುಗಳಾಗಿರಬೇಕು. ಆಗಸ್ಟ್ 31, 2023 ರಂತೆ ಫ್ಯಾಕ್ಟ್ಚೆಕಿಂಗ್ ಸೇವೆಗಳು ಅಥವಾ ಅಂತಹುದೇ ಚಟುವಟಿಕೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು. ವಿಶ್ವಾಸಾರ್ಹ ಕೆಲಸ ಮಾಡಿದ ಕಂಪನಿಯನ್ನು ಸರ್ಕಾರ ಗುರುತಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಉಳಿದ ಎರಡು ಕಂಪನಿಗಳು ಹಿಂದೆ ವಿಶ್ವಾಸಾರ್ಹ ಕೆಲಸ ಮಾಡಿದ ಮತ್ತು ಸರ್ಕಾರದೊಂದಿಗೆ ಪಾಲುದಾರಿಕೆಗೆ ಸಿದ್ಧವಾಗಿರುವ ವ್ಯಕ್ತಿಗಳನ್ನು ಒಳಗೊಂಡಿದೆ. ನಾವು ಅವುಗಳನ್ನೂ ಕೂಡ ಪಟ್ಟಿಯೊಳಗೆ ಸೇರಿಸಿಕೊಳ್ಳಲು ಅವಕಾಶವಿದಯೇ ಎಂದು ಪರಿಶೀಲಿಸುತ್ತೇವೆ ಎಂದರು.
ಅಂತಿಮವಾಗಿ ಸರ್ಕಾರದ ಶಾರ್ಟ್ಲಿಸ್ಟ್ನಲ್ಲಿರುವ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಮೂರು ಪ್ರಮುಖ ಕ್ಷೇತ್ರಗಳಾಗಿ ವಿಂಗಡಿಸಲಾಗುತ್ತದೆ, ಇದರಲ್ಲಿ ಒಂದು ಸತ್ಯ ಪರಿಶೀಲನಾ ತಂಡವಿದೆ, ಅದು ತಪ್ಪು ಮಾಹಿತಿಯನ್ನು ಪತ್ತೆ ಮಾಡುತ್ತದೆ ಮತ್ತು ಪರಿಹರಿಸುತ್ತದೆ. ಅನಾಲಿಟಿಕ್ಸ್ ಸ್ಕ್ವಾಡ್, ಇದು ತಪ್ಪು ಮಾಹಿತಿಯ ಪರಿಸರ ವ್ಯವಸ್ಥೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತದೆ. ಸಾಮರ್ಥ್ಯ ಅಭಿವೃದ್ಧಿ ತಂಡ, ಇದು ತಪ್ಪು ಮಾಹಿತಿ ಪರಿಸರ ವ್ಯವಸ್ಥೆಯ ಉಪಸ್ಥಿತಿ ಮತ್ತು ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನೆಡೆಸುತ್ತದೆ.