ಕಾರವಾರ : ಮೂರು ವರ್ಷ ಪ್ರಾಯದ ಚಿರತೆಯೊಂದು ಕಾಡು ಬೆಕ್ಕನ್ನು ಭೇಟೆಯಾಲು ಹೋಗಿ ವಿದ್ಯುತ್ ಕಂಬ ಏರಿದ ಪರಿಣಾಮ ಚಿರತೆ ಹಾಗೂ ಕಾಡು ಬೆಕ್ಕು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀರ್ನಳ್ಳಿ ಬಳಿಯ ಹುಡ್ಲಮನೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ನೀರ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹಲವು ತಿಂಗಳುಗಳಿಂದ ಚಿರತೆ ಓಡಾಟ ನಡೆಸುತ್ತಿದ್ದು, ತನ್ನ ಬೇಟೆ ಅರಸಿ ಹೋದ ಸಂದರ್ಭದಲ್ಲಿ ಕಾಡುಬೆಕ್ಕೊಂದು ಕಂಡಿದ್ದು, ಇದನ್ನು ಹಿಡಿಯಲು ಹೋದಾಗ ಕಾಡು ಬೆಕ್ಕು ವಿದ್ಯುತ್ ಕಂಬ ಏರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಆದ್ರೆ ವಿದ್ಯುತ್ ಸ್ಪರ್ಶಕ್ಕೆ ಕಾಡುಬೆಕ್ಕು ಅಲ್ಲಿಯೇ ಅಸುನೀಗಿದೆ. ಇದನ್ನು ಹಿಡಿಯಲು ಬಂದ ಚಿರತೆ ಸಹ ವಿದ್ಯುತ್ ಸ್ಪರ್ಶಿಸಿ ಸಾವು ಕಂಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಅಪರೂಪಕ್ಕೆ ಕಾಣಸಿಗುವ ಚಿರತೆ, ಕಾಡುಬೆಕ್ಕುಗಳು ವಿದ್ಯುತ್ ಅವಘಡದಿಂದ ಸಾವು ಕಾಣುತ್ತಿದ್ದು, ಈ ಬಗ್ಗೆ ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.