Monday, June 23, 2025
26.6 C
Bengaluru
Google search engine
LIVE
ಮನೆಜಿಲ್ಲೆಮಹಿಳೆ ಬಲಿ ಪಡೆದು ಜನಜಾನುವಾರುಗೆ ಉಪಟಳ ನೀಡಿದ್ದ ಹುಲಿ ಸೆರೆ

ಮಹಿಳೆ ಬಲಿ ಪಡೆದು ಜನಜಾನುವಾರುಗೆ ಉಪಟಳ ನೀಡಿದ್ದ ಹುಲಿ ಸೆರೆ

ಮೈಸೂರು :- ಬಂಡೀಪುರ ಸಂರಕ್ಷಿತಾ ಅರಣ್ಯದಲ್ಲಿ ಜನರ ನಿದ್ದೆ ಕೆಡಿಸಿದ್ದ ಮತ್ತು ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಹುಲಿಯನ್ನು ಹಿಡಿಯಲಾಗಿದೆ.

ಸೋಮವಾರ ಮಧ್ಯರಾತ್ರಿ 1.45ರ ಹೊತ್ತಿಗೆ ಎರಡು ದಿನದ ಹಿಂದೆ ಹಸುವೊಂದನ್ನು ಕೊಂದಿದ್ದ ಜಾಗಕ್ಕೆ ಬಂದ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. 10 ವರ್ಷದ ಗಂಡು ಹುಲಿ ಇದಾಗಿದ್ದು ಸದ್ಯ ಮೈಸೂರು ಮೃಗಾಲಯದಲ್ಲಿ ಬಿಡಲಾಗಿದೆ. ನವೆಂಬರ್ 24ರಂದು ಹೆಡಿಯಾಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗಿದ್ದ ರತ್ನಮ್ಮ (55) ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿತ್ತು. ದೇಹದ ಭಾಗವನ್ನೂ ತಿಂದು ಹಾಕಿತ್ತು. ಮರು ದಿನ ಅದೇ ಗ್ರಾಮದ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ನಂತರ ಜನರಲ್ಲಿ ಆತಂಕ ಹೆಚ್ಚಾಗಿ ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸದ್ಯ ಮೂರು ದಿನಗಳ ಸತತ ಕಾರ್ಯಾಚರಣೆಯಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಹುಲಿ ಒಮ್ಮೆ ಬೇಟೆಯಾಡಿದ ಸ್ಥಳಕ್ಕೆ ಮತ್ತೊಮ್ಮೆ ಬೇಟೆಗಾಗಿ ಬಂದೇ ಬರುತ್ತದೆ ಎಂಬ ಕಾರಣದಿಂದ ಹುಲಿ ದಾಳಿ ಮಾಡಿದ ಸ್ಥಳದಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ಸೋಮವಾರ ರಾತ್ರಿ 9ರ ಸಮಯದಲ್ಲಿಯೇ ಹುಲಿ ಹಸು ತಿನ್ನಲು ಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಮೀಪದಲ್ಲಿಯೇ ಬೋನು ಇರಿಸಿ ಅದರೊಳಗೆ ವೈದ್ಯಾಧಿಕಾರಿ ಡಾ.ವಾಸೀಂ ಜಾಫರ್‌ ಅವರು ಇರುವಂತೆ ನೋಡಿಕೊಂಡಿತ್ತು. ಸಿಬ್ಬಂದಿಯೂ ಅಲ್ಲಿಯೇ ಇದ್ದರು. ಮಧ್ಯರಾತ್ರಿ ಮತ್ತೆ ಹುಲಿ ಬಂದಾಗ ಅದಕ್ಕೆ ಅರವಳಿಕೆಯನ್ನು ಡಾ.ವಾಸೀಂ ಜಾಫರ್‌ ಅವರು ನೀಡುವಲ್ಲಿ ಯಶಸ್ವಿಯಾದರು. ಕೆಲವೇ ಕ್ಷಣದಲ್ಲಿ ಉರುಳಿ ಬಿದ್ದ ಹುಲಿಯನ್ನು ಬಲೆ ಹಾಕಿ ಸೆರೆ ಹಿಡಿದು ಬೆಳಗಿನ ಜಾವವೇ ಮೈಸೂರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಯಿತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments