ಗುಬ್ಬಿ : ಹಲವು ವರ್ಷಗಳಿಂದ ಸಾರ್ವಜನಿಕರ ಬಳಕೆಗೆ ಇದ್ದ ರಸ್ತೆಯನ್ನು ಏಕಾಏಕಿ ಬಂದ್ ಮಾಡಿ ಖಾಸಗಿ ಜಮೀನು ಎನ್ನಲಾಗುತ್ತಿದೆ. ರಸ್ತೆಯನ್ನು ಸುಗುಮಗೊಳಿಸಲು ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾಸ್ತವ ಸ್ಥಿತಿ ಆಲಿಸಿ ಮೊದಲಿಂದ ಓಡಾಡುತ್ತಾ ಇರುವ ರಸ್ತೆ, ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡುವಂತೆ ತಾಲ್ಲೂಕಿನ ಚೇಳೂರು ಹೋಬಳಿ ಗುಡ್ಡದಹಳ್ಳಿ ಗ್ರಾಮಸ್ಥರು ಗುಬ್ಬಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂತ್ರಸ್ತರು ಗುಡ್ಡದಹಳ್ಳಿ ಎಂಎಂಎ ಕಾವಲ್ ಸರ್ವೇ ನಂಬರ್ 55/2 ಸಂಖ್ಯೆಯಲ್ಲಿರುವ ಜಮೀನಿನಲ್ಲಿರುವ ರಸ್ತೆ ಆಜುಬಾಜು ವಾಸವಿರುವ ಸುಮಾರು 20 ಕುಟುಂಬಗಳ ಮನೆಗೆ ಅತ್ಯವಶ್ಯಕವಾಗಿದೆ. ಹಲವು ವರ್ಷದಿಂದ ಅಲ್ಲಿನ ಜನರಿಗೆ ಇರುವ ಇದೊಂದೇ ದಾರಿಗೆ ಕಳೆದ ಆರು ತಿಂಗಳ ಹಿಂದೆ ಚಂದ್ರಶೇಖರಯ್ಯ ಅವರು ನಮ್ಮ ಖಾಸಗಿ ಜಮೀನು ಇದು ರಸ್ತೆ ಇರಲ್ಲಿಲ್ಲ ಎಂದು ತಂತಿ ಬೇಲಿ ನಿರ್ಮಿಸಿ ಎಲ್ಲರಿಗೂ ತೊಂದರೆ ನೀಡಿದ್ದಾರೆ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು.
ತಂತಿ ಬೇಲಿ ನಿರ್ಮಾಣದಿಂದ ಇಪ್ಪತ್ತು ಮನೆಯವರು ಓಡಾಡಲು ಜಾಗವಿಲ್ಲ. ಮಕ್ಕಳು ಶಾಲೆಗೆ ಹೋಗಿಲ್ಲ. ಕೂಲಿ ಕೆಲಸಕ್ಕೆ ಯಾರೂ ಹೋಗದ ದುಸ್ಥಿತಿ ಬಂದಿದೆ. ರಸ್ತೆ ಇದೆ ಎಂಬ ಕಾರಣಕ್ಕೆ ಸಾಲ ಮಾಡಿ ಮನೆ ಕಟ್ಟಿಕೊಂಡು ವಾಸವಿದ್ದೇವೆ. ಈಗ ದಿಢೀರ್ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿರುವುದು ಎಲ್ಲರಿಗೂ ಗಾಬರಿ ತಂದಿದೆ. ಅಕ್ಕಪಕ್ಕದ ಜಮೀನುಗಳಿಗೆ ಗೊಬ್ಬರ ಸಾಗಿಸಲು ಸಹ ಸಾಧ್ಯವಾಗುತ್ತಿಲ್ಲ. ಹದಿನೈದು ಅಡಿಯ ಈ ರಸ್ತೆ ಮೊದಲಿನಂತೆ ಎಲ್ಲರಿಗೂ ಓಡಾಡಲು ಅನುವು ಮಾಡುವಂತೆ ಸ್ಥಳೀಯ ದಯಾನಂದ್ ಮನವಿ ಮಾಡಿದರು.
ಸಮಸ್ಯೆ ಆಲಿಸಿದ ತಹಶೀಲ್ದಾರ್ ಬಿ.ಆರತಿ ಅವರು ಗ್ರಾಮಸ್ಥರ ಜೊತೆ ಮಾತನಾಡಿ ಸ್ಥಳಕ್ಕೆ ಈ ಕೂಡಲೇ ಚೇಳೂರು ಕಂದಾಯ ನಿರೀಕ್ಷಕರು ಬರಲಿದ್ದಾರೆ. ಅಲ್ಲಿನ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ. ನಂತರವೂ ಹೀಗೆ ಮುಂದುವರೆದಲ್ಲಿ ಸ್ಥಳಕ್ಕೆ ಖುದ್ದು ಬರುವ ಭರವಸೆ ನೀಡಿದರು.