
ಬೆಂಗಳೂರು: ರದ್ದಾಗಿರುವ ಬಡವರ ರೇಷನ್ ಕಾರ್ಡ್ಗಳನ್ನು ಸರ್ಕಾರ ವಾಪಸ್ ಕೊಡದೇ ಹೋದರೆ ಹಳ್ಳಿಹಳ್ಳಿಗಳಲ್ಲಿ ತೀವ್ರ ಹೋರಾಟದ ಮೂಲಕ ಬಿಜೆಪಿ ಜಾಗೃತಿ ಮೂಡಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ರೇಷನ್ ಕಾರ್ಡ್ ರದ್ದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಪೂರ್ವದಲ್ಲಿ ಯಾವುದೇ ಷರತ್ತು ವಿಧಿಸದೇ ಎಲ್ಲರಿಗೂ ಉಚಿತ ಎಂದು ಗ್ಯಾರಂಟಿ ಘೋಷಿಸಿದ್ದೀರಿ. ಈಗ ಬಿಪಿಎಲ್ ರದ್ದುಪಡಿಸಿದ್ದೀರಿ. ಸಿಎಂ, ಆಹಾರ ಸಚಿವರು ಈಗ ಉತ್ತರ ಕೊಡಿ ಎಂದು ಆಗ್ರಹಿಸಿದರು.
ಜನರು ಕೇಂದ್ರದ, ರಾಜ್ಯದ ಸವಲತ್ತು ಪಡೆಯಲು ಬಿಪಿಎಲ್ ಕಾರ್ಡ್ ಬೇಕೇಬೇಕು. ಒಬ್ಬ ಬಡವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಕಾರ್ಡ್ ನೀಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ 2 ಸಾವಿರ ರೂ. ಕೊಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಇವತ್ತಿಗೂ ಯುವನಿಧಿ ಸಿಕ್ಕಿಲ್ಲ. ಅನ್ನಭಾಗ್ಯ 10 ಕೆ.ಜಿ. ಎಂದು ಬೊಬ್ಬೆ ಹೊಡೆದರು. ಆದರೆ ಕೊಟ್ಟಿದ್ದು ಐದು ಕೆ.ಜಿ. ಮಾತ್ರ. ಚುನಾವಣೆ ಮುನ್ನ ಬೊಬ್ಬೆ ಹೊಡೆಯುವುದು ಅಷ್ಟೇ. ಮಹಾರಾಷ್ಟ್ರ ಚುನಾವಣೆ ಮುಗಿಯುತ್ತಿದ್ದಂತೆ ಬಿಪಿಎಲ್ ರದ್ದು ಮಾಡಲು ಹೊರಟಿದ್ದೀರಿ. ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡಾ ರದ್ದು ಮಾಡಬಾರದು. ಮಾಡಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದರು.




