ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.ತಮ್ಮ ಪತ್ನಿ ಮುಡಾ ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹೆಂಡತಿ ಯಾರ ಮಾತು ಕೇಳಿ ಪತ್ರ ಬರೆದಿಲ್ಲ , ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿದ್ದಾರೆ. ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ಅವರ ಸಹೋದರ ನೀಡಿದ ಜಮೀನು ಅದು. ಮುಡಾದವರು ಅವರನ್ನು ವಶಪಡಿಸಿಕೊಂಡು ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿದ್ದರು. ಬದಲಿ ನಿವೇಶನವಾಗಿ ವಿಜಯ ನಗರದಲ್ಲಿ ನೀಡಿದ್ದರು. ಮುಡಾಗೆ ನಾವೇನು ಅಲ್ಲೇ ಕೊಡಿ ಎಂದು ಕೇಳಿರಲಿಲ್ಲ. ಅವರೇ ವಿಜಯನಗರದಲ್ಲಿ ಕೊಟ್ಟಿದ್ದರು. ಆದರೆ ಈಗ ವಿವಾದದಿಂದ ಮನನೊಂದು ನನ್ನ ಯಜಮಾನರಿಗೆ ರಾಜಕೀಯ ತೇಜೋವಧೆ ಆಗುತ್ತಿದೆ. ಹಾಗಾಗಿ ಸೈಟ್ ಬೇಡವೇ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.ಮುಡಾ ಕೇಸ್ನಲ್ಲಿ ಇಡಿ ಎಫ್ಐಆರ್ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನು ಏನಾದರೂ ಕ್ರಮ ಕೈಗೊಳ್ಳಲಿ. ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆ ಆಗಿಲ್ಲ ನನ್ನ ಪಾತ್ರ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದರು.ಸೈಟ್ ವಾಪಸ್ ನೀಡಿ ತಪ್ಪು ಒಪ್ಪಿಕೊಂಡಿದ್ದಾರೆ ಅನ್ನೋ ಬಿಜೆಪಿ (BJP) ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಹೇಗೆ ತಪ್ಪು ಒಪ್ಪಿದಂತಾಗುತ್ತದೆ? ನನ್ನ ಹೆಂಡತಿ ಮನನೊಂದು ಸೈಟ್ ವಾಪಸ್ ಮಾಡಿದ್ದಾರೆ. ಬಿಜೆಪಿಗರು ಸುಳ್ಳು ಹೇಳೋದರಲ್ಲಿ ನೀಪುಣರು. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ? ನಾನು ತಪ್ಪೇ ಮಾಡಿಲ್ಲವಲ್ಲ ಎಂದು ಹರಿಹಾಯ್ದರು.ಯಡಿಯೂರಪ್ಪನವರದು ನನ್ನದು ಬೇರೆ ಬೇರೆ ಪ್ರಕರಣ. ಅವರು ಡಿನೋಟಿಫಿಕೇಷನ್ ಮಾಡಿದ್ದಾರೆ. ನಾನೇನು ಮಾಡಿದ್ದೇನಾ? ನನ್ನ ಆದೇಶ ಪತ್ರ ವ್ಯವಹಾರ ಇತ್ತಾ? ಆ ಪ್ರಕರಣಕ್ಕೆ ಇದಕ್ಕೆ ಸಂಬಂಧ ಇಲ್ಲ. ನಾನು ಆತ್ಮಸಾಕ್ಷಿಯಾಗಿ ನಡೆದುಕೊಂಡಿದ್ದೇನೆ. ಹಾಗಾಗಿ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.