ಮೈಸೂರು : ಮೈಸೂರಿನ ಗ್ರಾಮಾಂತರ ಪ್ರದೇಶಗಳಾದ ಚಿಕ್ಕಕನ್ಯಾ ಮತ್ತು ದೊಡ್ಡಕನ್ಯಾ ಸುತ್ತಮುತ್ತಲಿನ ರೈತರ ಹೊಲದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ಗ್ರಾಮದಲ್ಲಿ ಮತ್ತು ಗ್ರಾಮದ ಸುತ್ತಮುತ್ತ ಕ್ಯಾಮೆರಾ ಟ್ರ್ಯಾಪ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾಗಳಲ್ಲಿ ಹುಲಿ ಚಲನವಲನದ ಚಿತ್ರ ಮತ್ತು ದೃಶ್ಯಾವಳಿಗಳು ಸೆರೆಯಾಗಿವೆ.

ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರಗೆ ಹೋಗದಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ 100 ಕಿ.ಮೀ ದೂರದಲ್ಲಿ ಹುಲಿ ಇರುವುದು ಅರಣ್ಯಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮಾತನಾಡಿ, ಚಿಕ್ಕಕನ್ಯಾ ಮತ್ತು ದೊಡ್ಡಕನ್ಯಾ ಗ್ರಾಮಗಳಲ್ಲಿ ಇರಿಸಲಾಗಿದ್ದ ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದೆ. ಟಿವಿಎಸ್ ಕಾರ್ಖಾನೆಯ ಸಿಸಿಟಿವಿ ದೃಶ್ಯಗಳಲ್ಲಿ ಹುಲಿ ಇರುವುದು ದೃಢಪಟ್ಟಿದೆ. ಹುಲಿಯು ಈ ಪ್ರದೇಶದಲ್ಲಿ ದನಗಳನ್ನು ಕೊಂದಿದ್ದು, ನಾವು ಬಂಡೀಪುರ ಕಾರ್ಯಾಚರಣೆಯ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಹುಲಿ ಸೆರೆಗೆ ಬೋನ್ಗಳನ್ನು ಇಟ್ಟಿದ್ದೇವೆ ಎಂದು ಹೇಳಿದರು.