ಕಲಬುರಗಿ : ಭಾರತ ಪಾಕಿಸ್ತಾನ ಕದನ ವಿರಾಮ ವಿಚಾರವನ್ನು ದೇಶದ ಜನತೆಗೆ ಪ್ರಧಾನಿ ಮೋದಿ ಸತ್ಯವನ್ನು ಹೇಳಬೇಕು.ಕದನ ವಿರಾಮ ಘೋಷಣೆ ಅಮೆರಿಕ ಮಾಡಿಸಿದ್ದಾ? ಮೋದಿ ಮಾಡಿದ್ದಾ? ಅಥವಾ ಪಾಕಿಸ್ತಾನ ಮಾಡಿಸಿದ್ದಾ ? ದೇಶದ ಜನರ ಮುಂದೆ ಈ ಸತ್ಯವನ್ನು ಮೋದಿ ಹೇಳಬೇಕು ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಮೋದಿಯವರು ಕೇವಲ ಸೋಶಿಯಲ್ ಮೀಡಿಯಾ ಬಳಸಿಕೊಂಡು ಯುದ್ಧ ಮಾಡುತ್ತಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಮೋದಿಯವರಿಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ.ಆದರೂ ಪ್ರಧಾನಿ ಮೋದಿ ಸರ್ವ ಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ, ಸಂಸತ್ ಅಧಿವೇಶನ ಕೂಡ ಕರೆಯುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ್ ಬೆದರಿಕೆಗೆ ಬಗ್ಗಿ ನೀವು ಈ ನಿರ್ಣಯ ಕೈಗೊಂಡಿದ್ದೀರಾ ? ಅತ್ತ ಪಾಕಿಸ್ತಾನ ಪ್ರಧಾನಿ ಅಲ್ಲಿನ ಸಂಸತ್ತಿನಲ್ಲಿ ಯುದ್ಧ ಗೆದ್ದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ.ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು ಈ ಬಗ್ಗೆ ಮಾತನಾಡಬೇಕಿತ್ತು.56 ಇಂಚು ಎದೆಯುಳ್ಳ ಪ್ರಧಾನಿ ಕೇವಲ ಕೆಂಪು ಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದ್ದಿರಿ ಎಂದ ಸಚಿವ ಪ್ರಿಯಾಂಕ್ ಹೇಳಿದರು..
ಪಾಕಿಸ್ತಾನಕ್ಕೆ ಈಗಾಗಲೇ ನಾಲ್ಕು ಬಾರಿ ಭಾರತ ಸೋಲಿಸಿದೆ.ಆದರೆ ಈ ಬಾರಿ ವಿದೇಶಾಂಗ ನೀತಿಯಲ್ಲಿಯೇ ಭಾರತ ಸೋತಿದೆ.ಪಹಲ್ಗಾಂ ದಾಳಿ ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ ? ಹೇಳ್ತಾರಾ ? ಅವರು ದೇಶದ ಒಳಗಡೆ ಬಂದಿದ್ದಾರಾ ? ಹೊರಗಡೆ ಹೋಗಿದ್ದಾರಾ ? ಎಲ್ಲಿದ್ದಾರೆ ? ಏಕೆ ಹೇಳುತ್ತಿಲ್ಲ ? ಎಂದು ಪ್ರಶ್ನಿಸಿದರು.
ಕೂಡಲೇ ಸಂಸತ್ ಅಧಿವೇಶನ ಕರೆದು ಈ ಬಗ್ಗೆ ಚರ್ಚಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ..