Tuesday, June 24, 2025
25.9 C
Bengaluru
Google search engine
LIVE
ಮನೆ#Exclusive Newsಅಂದು ಪಾನಿಪೂರಿ ಮಾರಾಟ.. ಇಂದು ಕ್ರಿಕೆಟ್​ನಲ್ಲಿ ಯಶಸ್ಸಿನ ಶಿಖರ.. ಇದು ಯಶಸ್ವಿ ಜೈಸ್ವಾಲ್ ಸ್ಪೂರ್ತಿಗಾಥೆ

ಅಂದು ಪಾನಿಪೂರಿ ಮಾರಾಟ.. ಇಂದು ಕ್ರಿಕೆಟ್​ನಲ್ಲಿ ಯಶಸ್ಸಿನ ಶಿಖರ.. ಇದು ಯಶಸ್ವಿ ಜೈಸ್ವಾಲ್ ಸ್ಪೂರ್ತಿಗಾಥೆ

ಹತ್ತುವರ್ಷದ ಬಾಲಕ.. ಅಪ್ಪ ಅಮ್ಮನನ್ನು ತೊರೆದು.. ಇರುವ ಊರನ್ನು ಬಿಟ್ಟು ಮುಂಬೈಗೆ ತೆರಳಿದ.. ಕ್ರಿಕೆಟ್ ಅಂದ್ರೆ ಪ್ರೀತಿ..ಆಟವೇ ಜೀವನ. ಆ ಮಹಾನಗರದ ರಸ್ತೆಗಳ ಮೇಲೆಲ್ಲಾ ತಿರುಗಿದ.. ಮಲಗೋಕೆ ಜಾಗವಿಲ್ಲ.. ಮೈದಾನದ ಟೆಂಟ್​ನಡಿ ನಿದ್ರಿಸಿದ.. ಪಾನಿಪೂರಿ ಮಾರಿದ.. ಟೀಂ ಇಂಡಿಯಾ ಪರವಾಗಿ ಆಡಬೇಕು.. ಮುಂಬೈನಲ್ಲಿ ಮನೆ ಖರೀದಿಸಬೇಕು ಎಂದು ಆಗಲೇ ಅಂದ್ಕೊಂಡಿದ್ದ.. 

ಒಂದಿಷ್ಟು ವರ್ಷಗಳು  ಉರುಳಿದವು.. ಈಗ ಟೀಂ ಇಂಡಿಯಾದಲ್ಲಿ ಆತ ಪ್ರಮುಖ ಆಟಗಾರ. ಟೆಸ್ಟ್ ಪಂದ್ಯಗಳಲ್ಲಿ ಮೇಲಿಂದ ಮೇಲೆ ದ್ವಿಶತಕ ಬಾರಿಸುತ್ತಾ ದಾಖಲೆಗಳನ್ನು ಪುಡಿಗಟ್ಟುತ್ತಿದ್ದಾನೆ.. ಇತ್ತೀಚಿಗೆ ಮುಂಬೈನ ಅತ್ಯಂತ ವಿಲಾಸಿ ಪ್ರದೇಶದಲ್ಲಿ 5 ಕೋಟಿಗೂ ಹೆಚ್ಚುಮೌಲ್ಯದ ಐದು ಬೆಡ್​ ರೂಂಗಳ ಫ್ಲಾಟ್ ಖರೀದಿ ಮಾಡಿದ್ದಾನೆ.. ಆತ ಬೇರಾರು ಅಲ್ಲ.. ಯಶಸ್ವಿ ಜೈಸ್ವಾಲ್.. ಏನು ಇಲ್ಲದ ಸ್ಥಿತಿಯಿಂದ ಇಲ್ಲಿಯವರೆಗೂ ತಲುಪಿದ ಯಶಸ್ವಿ ಜೈಸ್ವಾಲ್ ಸ್ಪೂರ್ತಿದಾಯಕ ಪಯಣ ಎಲ್ಲರಿಗೂ ಇಂದು ಆದರ್ಶ.. ಆತ ವ್ಯಕ್ತಿತ್ವ ವಿಕಸನದ ಪಾಠ.

ಎಲ್ಲರೂ ಕನಸು ಕಾಣ್ತಾರೆ.. ಗುರಿ ಇಟ್ಟುಕೊಳ್ತಾರೆ.. ಈ ದಿಕ್ಕಿನಲ್ಲಿ ಕೆಲ ದಿನ ಪಯಣಿಸುತ್ತಾರೆ. ಕೆಲ ತಿಂಗಳು ಕಷ್ಟಪಡುತ್ತಾರೆ. ಆದರೆ, ಬಯಸಿದ ಫಲಿತಾಂಶ ಕಾಣಿಸದಿದ್ರೆ ಇದು ತಮ್ಮ ಕೈಲಿ ಆಗಲ್ಲ ಎಂದು ಮಧ್ಯದಲ್ಲೇ ಗುರಿಯನ್ನು ಕೈಬಿಡುತ್ತಾರೆ. ಹೊಸ ವರ್ಷ ಬಂದ ಕೂಡ್ಲೇ ಅದು ಮಾಡೋಣ.. ಇದು ಮಾಡೋಣ ಎಂದು ನಿರ್ಣಯ ತೆಗೆದುಕೊಳ್ತಾರೆ. ಆದರೆ, ಒಂದು ವಾರ ಕಳೆಯುವಷ್ಟರಲ್ಲಿ ಅದನ್ನು ಮರೆತುಬಿಟ್ಟಿರುತ್ತಾರೆ. ಕನಸು ಕಾಣೋದು ದೊಡ್ಡದಲ್ಲ.. ಅದನ್ನು ನನಸು ಮಾಡಿಕೊಳ್ಳುವುದು ಮುಖ್ಯ.. ಗಮ್ಯವನ್ನು ತಲುಪುವವರೆಗೂ ವಿಶ್ರಮಿಸದೇ ಹೋರಾಟ ನಡೆಸುವವರು ವಿಜೇತರಾಗುತ್ತಾರೆ.. ಅಂತಹ ವಿಜೇತರಲ್ಲಿ ಒಬ್ಬರು ಯಶಸ್ವಿ ಜೈಸ್ವಾಲ್.

ಬಲವಾದ ಸಂಕಲ್ಪ ಹೊಂದಿದ್ದರೇ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜೈಸ್ವಾಲ್ ಉದಾಹರಣೆ. ಗುರಿ ತಲುಪುವವರೆಗೂ ಹೋರಾಟ ಮಾಡಿದ ಭಯವರಿಯದ ವೀರ ಜೈಸ್ವಾಲ್ ಎಂದರೇ ತಪ್ಪಾಗಲಿಕ್ಕಿಲ್ಲ. ಆತನ ದಾರಿಯಲ್ಲಿ ಎಷ್ಟೆಷ್ಟೋ ಸವಾಲು. ಯಶಸ್ವಿಯಂತಹ ಹಿನ್ನೆಲೆ ಹೊಂದಿರುವ ಆಟಗಾರ ಈ ಮಟ್ಟಕ್ಕೆ ಬೆಳೆಯುವುದು ಸಣ್ಣ ವಿಚಾರ ಅಲ್ಲವೇ ಅಲ್ಲ. ಕಷ್ಟ ಪಟ್ಟಲ್ಲಿ ಕನಸು ನನಸು ಮಾಡಿಕೊಳ್ಳಬಹುದು ಎಂಬುದನ್ನು ಮತ್ತೊಮ್ಮೆ ಜೈಸ್ವಾಲ್ ನಿರೂಪಿಸಿದ್ದಾರೆ.

ಒಂದು ದಿನದಲ್ಲಿ ಏನೂ ಬದಲಾಗಲ್ಲ

ಒಂದು ದಿನದಲ್ಲಿ ಏನೂ ಬದಲಾಗಲ್ಲ.. ಅಂದುಕೊಂಡ ಕೂಡಲೇ ಫಲಿತಾಂಶ ಸಿಗಲ್ಲ.. ನಿರಂತರ ಪ್ರಯತ್ನ ಅತ್ಯಗತ್ಯ.. ಹೋರಾಟವಿಲ್ಲದೇ ಗೆಲುವಿಲ್ಲ.. ಗೆಲುವು ಕೈಗೆಟುಕಲ್ಲ ಎಂದು ಪ್ರಯತ್ನ ನಿಲ್ಲಿಸಿದರೇ ಏನನ್ನೂ ಸಾಧಿಸಲು ಆಗಲ್ಲ… ಹೀಗೆ ಯಶಸ್ವಿ ಜೈಸ್ವಾಲ್ ಪ್ರಯತ್ನ ನಿಲ್ಲಿಸಿದ್ದರೇ ಇಂದು ಆತನ ಬಗ್ಗೆ ಹೇಳುವ ಅಗತ್ಯವೇ ಇರುತ್ತಿರಲಿಲ್ಲ. ಯಶಸ್ವಿನ ಪಯಣದ ಹಾದಿಯಲ್ಲಿ ಸಾಕಷ್ಟು ಹೊಡೆತಗಳನ್ನು ತಿಂದಿದ್ದಾರೆ. ಎಷ್ಟೋ ಅಡೆತಡೆ ದಾಟಿದ್ದಾರೆ.

ಕ್ರಿಕೆಟ್ ಆಡ್ತೀನಿ ಅಂದ್ರೆ ಹೊಡೆದಿದ್ದರು ಅಪ್ಪ

ಕ್ರಿಕೆಟ್ ಆಡ್ತೀನಿ ಅಂದ್ರೆ ಅಪ್ಪ ಅಮ್ಮ ಬೇಡ ಅಂದ್ರು. ತಂದೆಯಂತೂ ಒಮ್ಮೆ ಹೊಡೆದೇಬಿಟ್ಟಿದ್ದರು. ಆದರೆ, ಯಶಸ್ವಿಗೆ ಆಟ ಎಂದರೇ ಪ್ರಾಣ.. ಅದಕ್ಕೆ ಉತ್ತರಪ್ರದೇಶದಿಂದ ಉಟ್ಟ ಬಟ್ಟೆಯಲ್ಲೇ ಏನು ಗೊತ್ತಾಗದ ವಯಸ್ಸಿನಲ್ಲಿ ಮುಂಬೈಗೆ ಬಂದುಬಿಟ್ಟರು. ಕೈಯಲ್ಲಿ ದುಡ್ಡಿಲ್ಲದೇ ಹಸಿದ ಹೊಟ್ಟೆಯಲ್ಲಿದ್ದ.. ಡೈರಿಯಲ್ಲಿ ಕೆಲಸ ಸಿಕ್ಕಿದರೂ, ಆಟದ ಕಡೆಯೇ ಯಶಸ್ವಿ ಗಮನವಿದ್ದ ಕಾರಣ ಮಾಲೀಕರು, ನೀನು ಕೆಲಸಕ್ಕೆ ಬರಬೇಡ ಅಂದರು. ಎಲ್ಲಿ ಉಳಿಯಬೇಕು ಎಂದು ಗೊತ್ತಾಗದೇ ಆಜಾದ್ ಮೈದಾನದ ಟೆಂಟ್​ನಡಿ ಮಲಗಿದರು.. ಅಲ್ಲಿಯೇ ಪಾನಿಪೂರಿ ಮಾರಿದರು. ಹೀಗೆ ಎಷ್ಟೋ ಸಮಸ್ಯೆ.. ಒಂದಿನವಲ್ಲ.. ಒಂದು ತಿಂಗಳಲ್ಲ. ಮೂರು ವರ್ಷಗಳ ಕಾಲ ಇದೇ ಸಮಸ್ಯೆ.. ಆದರೂ ಜೈಸ್ವಾಲ್​ ಕ್ರಿಕೆಟ್ ಧ್ಯಾನ ಬಿಟ್ಟಿರಲಿಲ್ಲ.. ಹೀಗಾಗಿಯೇ ಯಶಸ್ವಿ ಜೈಸ್ವಾಲ್ ತಾನು ಅಂದುಕೊಂಡಿದ್ದನ್ನು ಕೊನೆಗೂ ಸಾಧಿಸಿಯೇಬಿಟ್ಟರು. ಆತನ ತಾಳ್ಮೆ.. ಆತನ ನಂಬಿಕೆ.. ಕಷ್ಟಗಳಿಗೆ ಹೆದರದ ವ್ಯಕ್ತಿತ್ವ.. ಸವಾಲುಗಳನ್ನು ಎದುರಿಸುವ ಧೈರ್ಯ.. ಯಶಸ್ವಿಯನ್ನು ಯಶಸ್ಸಿನ ಶಿಖರ ಏರುವಂತೆ ಮಾಡಿದೆ.

 

ಅವಕಾಶ ಬಿಡಬೇಡಿ.. 

ಅವಕಾಶ ಎಂಬುದು ಎಲ್ಲರಿಗೂ ಸಿಗಲ್ಲ. ಅದು ಕೈಗೆಟುವುದು ಕಷ್ಟ.. ಅವಕಾಶ ಸಿಕ್ಕಾಗ ಸದ್ವಿನಿಯೋಗಪಡಿಸಿಕೊಳ್ಳಬೇಕು.. ಇಲ್ಲ ಎಂದರೇ ದಾರಿಗಳು ಮುಚ್ಚಿಕೊಳ್ಳುತ್ತವೆ. ಯಶಸ್ವಿ ಜೈಸ್ವಾಲ್ ಸಿಕ್ಕ ಸಣ್ಣ ಅವಕಾಶಗಳನ್ನು ಎರಡು ಕೈಗಳಲ್ಲಿ ಬಾಚಿಕೊಂಡರು. ದೇಶಿಯ ಟೂರ್ನಿಗಳಲ್ಲಿಮುಂಬೈ ಪರ ಮಿಂಚಿದರು. 17 ವರ್ಷಕ್ಕೆ ಲಿಸ್ಟ್ ಎ ಕ್ರಿಕೆಟ್​​ನಲ್ಲಿ ಡಬಲ್ ಸೆಂಚುರಿ ಬಾರಿಸಿ ದಾಖಲೆ ಬರೆದರು. 2020ರಲ್ಲಿ ಅಂಡರ್ 19 ವಿಶ್ವಕಪ್​​ನಲ್ಲಿ ಸಿಕ್ಕ ಅವಕಾಶವನ್ನು ಸಖತ್ತಾಗಿ ಬಳಸಿಕೊಂಡರು. ಟೂರ್ನಿಯಲ್ಲಿ ಎಲ್ಲರಿಗಿಂತ ಹೆಚ್ಚು(400) ರನ್ ಬಾರಿಸಿದರು. ಕಳೆದ ವರ್ಷ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಂಗಳಕ್ಕೆ ಇಳಿದು ಮಿಂಚಿದರು. ಅತ್ಯಂತ ವೇಗದ ಶತಕ ಬಾರಿಸಿದರು.

ಟೀಂ ಇಂಡಿಯಾ ಪರವಾಗಿ ಆಡುವ ಕನಸು 2023ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಾಕಾರ ಆಯ್ತು. ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಮೊದಲ ಇನ್ನಿಂಗ್ಸ್​​ನಲ್ಲೇ 171 ರನ್ ಸಿಡಿದರು. ಈಗ ಇಂಗ್ಲೆಂಡ್ ವಿರುದ್ಧ ಸತತ 2 ಟೆಸ್ಟ್​ಗಳಲ್ಲಿ ಎರಡು ದ್ವಿಶತಕ ಬಾರಿಸಿದರು. ಈವರೆಗೂ ಏಳು ಟೆಸ್ಟ್​ಗಳಲ್ಲಿ ಶೇಕಡಾ 71.75 ಸರಾಸರಿಯಲ್ಲಿ 861 ರನ್ ಬಾರಿಸಿದರು. 17 ಟಿ-20 ಪಂದ್ಯಗಳಲ್ಲಿ 161.93 ಸ್ಟ್ರೈಕ್​ರೇಟ್​ನೊಂದಿಗೆ 502 ರನ್ ಗಳಿಸಿದ್ದಾರೆ

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments