ಬೆಂಗಳೂರು: ಖ್ಯಾತ ವಿದ್ವಾಂಸ, ಸಂಶೋಧಕ, ಕನ್ನಡಪರ ಚಿಂತಕ, ಹೋರಾಟಗಾರ ಡಾ.ಪಿ.ವಿ.ನಾರಾಯಣ ಅವರು ಇನ್ನಿಲ್ಲ.
ಸಾಹಿತಿ ಪಿ. ವಿ. ನಾರಾಯಣ (82) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಜಯನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಮಧ್ಯಾಹ್ನ 3 ಗಂಟೆಯ ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಡಾ.ಪಿ.ವಿ.ನಾರಾಯಣ ಅವರ ಹಿನ್ನಲೆ:
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ 1942ರ ಡಿ.18 ರಂದು ಜನಿಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ‘ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯಕತತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ, ಪದ್ಮನೀ ಪರಿಣಯ, ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ, ಅಂತರ, ವಿಕಾಸ, ಶೋಧನೆ ನಿರ್ಧಾರ, ಧರ್ಮಕಾರಣ ಸೇರಿ ಒಟ್ಟು 45ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವಚನ ವ್ಯಾಸಂಗ ಕೃತಿಗೆ ಇಳಕಲ್ಲಿನ ಶ್ರೀವಿಜಯ ಮಹಂತೇಶ ಮಠ ಪುರಸ್ಕಾರ, ಸಮಾಜದ ಮೇಲೆ ವಿಜ್ಞಾನದ ಪ್ರಭಾವ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಶೋಧನೆ’ ಕಾದಂಬರಿಗೆ ಸುಧಾ ವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ಅವರಿಗೆ ಸಂದಿವೆ. ವಿದ್ವತ್ತು ವಿನಯಗಳ ನಾರಾಯಣವೆಂದು ಅನ್ವರ್ಥವಾಗಿ ಬೆಳದು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೃತಿಗಳನ್ನು ನೀಡಿದ್ದರೆ. ಕನ್ನಡ. ಕನ್ನಡಿಗ ಮತ್ತು ಕರ್ನಾಟಕದ ಹಿತಚಿಂತಕರಾಗಿ. ಕನ್ನಡಪರ ಹೋರಾಟಗಾರಾಗಿ. ಕನ್ನಡಪರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು