ಬೆಂಗಳೂರು: ಇತ್ತಿಚಿಗೆ ತನ್ನ ಹೆಂಡತಿಯನ್ನೆ ಕೊಂದಿದ್ದ ಕೇಸ್ಗೆ ಇದೀಗ ಬಿಗ್ಟ್ವಿಸ್ಟ್ ಸಿಕ್ಕಿದೆ. ಕೊಮಂಗಲದಲ್ಲಿ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿಯನ್ನು ಕೊಂದು ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಪರಾರಿಯಾಗಿದ್ದ. ಬಳಿಕ ಆತನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತರಲಾಗಿತ್ತು.
ನಿನ್ನೆ ರಾತ್ರಿ ಆರೋಪಿಯನ್ನು ಮ್ಯಾಜಿಸ್ಟೇಟ್ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಬಳಿಕ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನಲೆ ಆರೋಪಿ ರಾಕೇಶ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಈ ಘಟನೆ ಕುರಿತು ಆರೋಪಿ ರಾಕೇಶ್ನ ತಂದೆ ರಾಜೇಂದ್ರ ಕಡೆಕರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಮೃತ ಗೌರಿ ರಾಜೇಂದ್ರ ಅವರ ಸಹೋದರಿಯ ಮಗಳಾಗಿದ್ದು, ರಾಕೇಶ್ ಮತ್ತು ಗೌರಿಯ ಮದುವೆಗೆ ಕುಟುಂಬದ ಒಪ್ಪಿಗೆ ಇರಲಿಲ್ಲ. “ಗೌರಿ ಮದುವೆ ವಿಚಾರದಲ್ಲಿ ಕುಟುಂಬದ ಜೊತೆ ಜಗಳ ಮಾಡಿಕೊಂಡಿದ್ದಳು. ಎರಡು ವರ್ಷಗಳ ಹಿಂದೆ ಎಲ್ಲರ ವಿರೋಧದ ನಡುವೆಯೂ ಇಬ್ಬರು ಮದುವೆಯಾದರು. ಆದರೆ, ಗೌರಿ ಆಗಾಗ ರಾಕೇಶ್ ಮತ್ತು ಕುಟುಂಬಸ್ಥರ ಜೊತೆ ಜಗಳಾಡುತ್ತಿದ್ದಳು. ಗಂಡ-ಹೆಂಡತಿಯ ಮನಸ್ತಾಪ ಪೊಲೀಸ್ ಠಾಣೆಯವರೆಗೂ ಹೋಗಿತ್ತು,” ಎಂದು ರಾಜೇಂದ್ರ ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿ ರಾಕೇಶ್ ತನ್ನ ಪತ್ನಿಯನ್ನು ಕೊಂದು ಶವವನ್ನು ಸೂಟ್ಕೇಸ್ನಲ್ಲಿ ತುಂಬಿದ್ದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಘಟನೆಯ ಸಂಪೂರ್ಣ ವಿವರಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಗಂಡ-ಹೆಂಡತಿಯ ನಡುವಿನ ದೀರ್ಘಕಾಲದ ಮನಸ್ತಾಪವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮುಂದಿನ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಪ್ರಕರಣದ ಸಂಬಂಧ ಪೊಲೀಸರು ಆರೋಪಿಯ ಕುಟುಂಬಸ್ಥರು ಮತ್ತು ಗೌರಿಯ ಕುಟುಂಬದವರ ಹೇಳಿಕೆಗಳನ್ನು ದಾಖಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನದ ನಂತರ ರಾಕೇಶ್ನನ್ನು ಮತ್ತೆ ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿದುಬಂದಿದೆ.