ತುಮಕೂರು: ಪ್ರೀತಿಸಿ ಮದುವೆಯಾದ ಪತಿಯ ಸಾವು ಸಂಭವಿಸಿ ತಿಂಗಳು ಕಳೆಯುವ ಮೊದಲೇ ಪತ್ನಿ ಮತ್ತೊಂದು ಮದುವೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮೊದಲಿಗೆ ಹೃದಯಾಘಾತ ಎಂದು ಬಿಂಬಿತವಾಗಿದ್ದ ಸಾವು, ಈಗ ಕೊಲೆ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದು, ಪೊಲೀಸರು ಹೂತಿದ್ದ ಶವವನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಪರಮೇಶ್ ಮತ್ತು ಆಶಾ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪೋಷಕರ ವಿರೋಧದ ನಡುವೆಯೂ ಒಂದಾಗಿದ್ದ ಈ ದಂಪತಿಗಳಿಗೆ ಇದು ಎರಡನೇ ವಿವಾಹವಾಗಿತ್ತು. ದಶಕಗಳ ಕಾಲ ಸುಗಮವಾಗಿದ್ದ ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಕಳೆದ ಒಂದೂವರೆ ವರ್ಷದಿಂದ. ಆಶಾ ಕ್ಯಾಟರಿಂಗ್ ಕೆಲಸಕ್ಕೆ ಸೇರಿಕೊಂಡ ನಂತರ ದಂಪತಿಗಳ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ಶುರುವಾಗುತ್ತಿತ್ತು ಎನ್ನಲಾಗಿದೆ.
ಜನವರಿ 30ರಂದು ಪರಮೇಶ್ ಇದ್ದಕ್ಕಿದ್ದಂತೆ ಮೃತಪಟ್ಟಿದ್ದರು. ಆಗ ಆಶಾ ತನ್ನ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಎಲ್ಲರನ್ನೂ ನಂಬಿಸಿ, ಯಾವುದೇ ಪೊಲೀಸ್ ದೂರು ನೀಡದೆ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮುಗಿಸಿದ್ದರು. ಆದರೆ, ಪತಿ ಸತ್ತು ಕೇವಲ 20 ದಿನಕ್ಕೆ ಆಶಾ ತಾನು ಕೆಲಸ ಮಾಡುತ್ತಿದ್ದ ಕ್ಯಾಟರಿಂಗ್ ವಿಭಾಗದ ವ್ಯಕ್ತಿಯನ್ನೇ ಮೂರನೇ ಮದುವೆಯಾಗಿದ್ದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಪರಮೇಶ್ ಅವ ಸಹೋದರಿ ಈ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಆಶಾ ತನ್ನ ಪತಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಳು. ಈ ಸಾವಿನಲ್ಲಿ ಆಶಾ, ಆಕೆಯ ಗೆಳತಿ ಮತ್ತು ಈಗ ಮದುವೆಯಾಗಿರುವ ಹೊಸ ವ್ಯಕ್ತಿಯ ಕೈವಾಡವಿದೆ,” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಹೆಬ್ಬೂರು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು, ದಾಸರಹಳ್ಳಿಯಲ್ಲಿ ಹೂತುಹಾಕಲಾಗಿದ್ದ ಪರಮೇಶ್ ಮೃತದೇಹವನ್ನು ಗುರುವಾರ ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಎಫ್ಎಸ್ಎಲ್ (FSL) ತಂಡ ಭೇಟಿ ನೀಡಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ವೈದ್ಯಾಧಿಕಾರಿಗಳು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬಂದ ನಂತರ ಪರಮೇಶ್ ಸಾವು ಸಹಜವೇ ಅಥವಾ ವ್ಯವಸ್ಥಿತ ಕೊಲೆಯೇ ಎಂಬುದು ಬಯಲಾಗಲಿದೆ.


