ಬೆಂಗಳೂರು: ಸ್ಯಾಂಡಲ್ವುಡ್ನ ‘ಬಾಕ್ಸ್ ಆಫೀಸ್ ಸುಲ್ತಾನ’ ನಟ ದರ್ಶನ್ ಜೈಲು ಸೇರಿ ಹಲವು ತಿಂಗಳುಗಳೇ ಕಳೆದಿವೆ. ನೆಚ್ಚಿನ ನಟನ ಬಿಡುಗಡೆಗಾಗಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹರಕೆಗಳನ್ನು ಸಲ್ಲಿಸುತ್ತಾ ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ದರ್ಶನ್ ಅವರ ಜೈಲು ವಾಸ ಮತ್ತು ಭವಿಷ್ಯದ ಬಗ್ಗೆ ಹತ್ತಾರು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಆದರೆ, ಇದೀಗ ದೇಶದ ಪ್ರಮುಖ ಕಾಲಜ್ಞಾನಿಗಳಲ್ಲಿ ಒಬ್ಬರಾದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕುತೂಹಲ ಮೂಡಿಸಿದ್ದಾರೆ.

ದರ್ಶನ್ ಅವರ ರಾಜಕೀಯ ಭವಿಷ್ಯ ಮತ್ತು ಜೈಲು ಬಿಡುಗಡೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಬಹಳ ಮಾರ್ಮಿಕವಾಗಿ ಮಾತನಾಡಿದ್ದಾರೆ. “ಪ್ರಕರಣ ಈಗ ನ್ಯಾಯಾಲಯದಲ್ಲಿದೆ, ಈ ಸಮಯದಲ್ಲಿ ಅದರ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ದರ್ಶನ್ ಅವರು ಮೊದಲು ಜೈಲಿನಿಂದ ಹೊರಬರಲಿ, ಆ ನಂತ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಶ್ರೀಗಳ ಈ ಒಂದು ಹೇಳಿಕೆ ಈಗ ಅಭಿಮಾನಿಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶ್ರೀಗಳು ‘ಮೊದಲು ಹೊರಬರಲಿ’ ಎಂದು ಹೇಳಿರುವುದು ದರ್ಶನ್ ಬಿಡುಗಡೆ ಸದ್ಯಕ್ಕೆ ಸುಲಭವಿಲ್ಲವೇ? ಎಂಬ ಆತಂಕವನ್ನು ಫ್ಯಾನ್ಸ್ನಲ್ಲಿ ಮೂಡಿಸಿದೆ.

ದರ್ಶನ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆಯೇ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಹಲವು ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಿದ್ದ ದರ್ಶನ್, ನೇರವಾಗಿ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕೋಡಿ ಶ್ರೀಗಳು “ಹೊರಬಂದ ಮೇಲೆ ರಾಜಕೀಯ ಭವಿಷ್ಯದ ಬಗ್ಗೆ ಹೇಳುವೆ” ಎಂದಿರುವುದು, ದರ್ಶನ್ ಬಿಡುಗಡೆಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಹೊಸ ಬದಲಾವಣೆಗಳು ಸಂಭವಿಸಬಹುದೇ ಎಂಬ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
ಈಗಾಗಲೇ ಕೆಲ ಜ್ಯೋತಿಷಿಗಳು “ದರ್ಶನ್ ಇನ್ನು ಆರು ತಿಂಗಳೊಳಗೆ ಜೈಲಿನಿಂದ ಹೊರಬರುತ್ತಾರೆ, ಅವರಿಗೆ ರಾಜಯೋಗವಿದೆ” ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಸದಾ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿ ಶ್ರೀಗಳು ನೇರ ಉತ್ತರ ನೀಡದೆ ಇರುವುದು ಅಭಿಮಾನಿಗಳಿಗೆ ತುಸು ನಿರಾಸೆ ತಂದಿದೆ. ಜೈಲಿನ ಅಂಧಕಾರದಿಂದ ಹೊರಬಂದು ‘ಡಿ-ಬಾಸ್’ ಮತ್ತೆ ಬೆಳ್ಳಿ ಪರದೆಯ ಮೇಲೆ ಅಬ್ಬರಿಸುವುದನ್ನು ನೋಡಲು ‘ಡಿ-ಬಳಗ’ ಕಾದು ಕುಳಿತಿದೆ.


