ಮಂಗಳೂರು: ಕೇಂದ್ರ ಸರ್ಕಾರ ಅಂಗೀಕರಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಯಾರನ್ನೂ ಗಮನಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ವಕ್ಫ್ ವಿಚಾರದಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ಜಾರಿ ವಿಚಾರದಲ್ಲಿ ವಕ್ಫ್ನಲ್ಲಿ ತಪ್ಪಾಗಿದ್ದರೆ ಅಥವಾ ಭೂಮಿ ದುರುಪಯೋಗ ಆಗಿದ್ದರೆ ಸರಿ, ಆದರೆ ಕಾನೂನಿಗೆ ಅದಕ್ಕೂ ಸಂಬಂಧ ಇಲ್ಲ. ಈ ಕಾನೂನು ಸಂವಿಧಾನ ವಿರೋಧಿಯಾಗಿದೆ. ವಕ್ಫ್ ವಿಚಾರ ಸೂಕ್ಷ್ಮವಾಗಿದ್ದು, ಇದರಲ್ಲಿ ದ್ವೇಷ ಸಾಧಿಸುವಂಥದ್ದು ಸರಿಯಲ್ಲ. ರಾಜ್ಯದ ಭೂಮಿಯಲ್ಲಿ ಹಿಂದೂ ಧರ್ಮದ ಟ್ರಸ್ಟ್ಗಳು ಕೂಡ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇದೆ. ವಕ್ಫ್ ಕೂಡ ಕೆಲವು ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಇದೆ. ಇಂತಹ ಕ್ರಮಗಳು ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದರು.